ಬೆಂಗಳೂರು : ಕಾಂಗ್ರೆಸ್ ಹೈಕಮಾಂಡ್ ಕೋಲಾರಕ್ಕೆ ಟಿಕೆಟ್ ಘೋಷಣೆ ಮಾಡಿದೆ. ರಮೇಶ್ ಕುಮಾರ್ ಹಾಗೂ ಸಚಿವ ಕೆಎಚ್ ಮುನಿಯಪ್ಪ ಅವರ ಬಣ ಬಡಿದಾಟದ ನಡುವೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಕೆವಿ ಗೌತಮ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ಕೋಲಾರದಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರಾದ ರಮೇಶ್ ಕುಮಾರ್ ಹಾಗೂ ಸಚಿವ ಕೆಎಚ್ ಮುನಿಯಪ್ಪ ಅವರ ಬಣದ ನಡುವೆ ಭಾರೀ ತಿಕ್ಕಾಟ ನಡೆದಿತ್ತು.
ಇನ್ನೇನು ಕೆಎಚ್ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್ ನೀಡಲಾಗಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಕೋಲಾರ ಕಾಂಗ್ರೆಸ್ನಲ್ಲಿ ಕೋಲಾಹಲವೇ ಆರಂಭವಾಗಿತ್ತು. ಸಚಿವ ಎಂಸಿ ಸುಧಾಕರ್ ಸೇರಿದಂತೆ ಹಲವು ನಾಯಕರು ಸಭಾಪತಿ ಕಚೇರಿಗೆ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಹಸನ ಕೂಡ ನಡೆದಿತ್ತು. ಈ ತಿಕ್ಕಾಟದಿಂದ ಬೇಸತ್ತ ಹೈಕಮಾಂಡ್ ಎರಡೂ ಬಣಗಳನ್ನು ಹೊರತು ಪಡಿಸಿ ಇದೀಗ ಅಚ್ಚರಿಯ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿದೆ.
ಇನ್ನು, ಕೋಲಾರದ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಹೈಕಮಾಂಡ್ ಟಿಕೆಟ್ ಘೋಷಣೆಯ ಬಳಿಕ ಎರಡು ಬಣದ ನಾಯಕರ ಮುಂದಿನ ರಾಜಕೀಯ ನಡೆ ಕುತೂಹಲ ಕೆರಳಿಸಿದೆ. ಈ ಅಸಮಾಧಾನದ ಮಧ್ಯೆ ಕೆ.ವಿ ಗೌತಮ್ ಅವರು ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಎದುರಿಸಬೇಕಿದೆ.
ಇದನ್ನೂ ಓದಿ : ಇಂದು ಸಂಸದೆ ಸುಮಲತಾರಿಂದ ಮಹತ್ವದ ಸಭೆ : ಬಿಜೆಪಿ-ಜೆಡಿಎಸ್ ಮೈತ್ರಿಗೆ ಕಂಟಕವಾಗ್ತಾರಾ?