ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಕಂಬಿ ಹಿಂದೆ ಬಂಧಿಯಾಗಿದೆ. ಈ ಬೆನ್ನಲ್ಲೇ ‘ಡಿ ಗ್ಯಾಂಗ್’ ಎಂಬ ಟೈಟಲ್ಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ‘ಡಿ ಗ್ಯಾಂಗ್’ ಹೆಸರಿನ ಬಳಕೆ ಜೋರಾಗಿದೆ. ಹೀಗಿರುವಾಗಲೇ ಚಿತ್ರತಂಡವೊಂದು ‘ಡಿ ಗ್ಯಾಂಗ್’ ಹೆಸರು ನೊಂದಾವಣಿಗೆ ಫಿಲಂ ಚೇಂಬರ್ಗೆ ಅರ್ಜಿ ಸಲ್ಲಿಸಿದೆ. ಆದರೆ ಆ ಹೆಸರನ್ನು ನೀಡಲು ಸಾಧ್ಯವಿಲ್ಲವೆಂದು ಚೇಂಬರ್ ಹೇಳಿದೆ. ಸದ್ಯ ವಾಣಿಜ್ಯ ಮಂಡಳಿಯ ಈ ನಡೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ದರ್ಶನ್ ಕಂಡರೆ ಚಲನಚಿತ್ರ ವಾಣಿಜ್ಯ ಮಂಡಳಿ ಹೆದರುತ್ತಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.
ನಿರ್ದೇಶಕ ರಾಕಿ ದಾವಣಗೆರೆಯ FM ಫಿಲ್ಮ್ಸ್ ಬ್ಯಾನರ್ ಅಡಿ ‘ಡಿ ಗ್ಯಾಂಗ್’ ಟೈಟಲ್ ನೋಂದಣಿ ಮುಂದಾಗಿದ್ದರು. ಆದ್ರೆ ಚಲನಚಿತ್ರ ವಾಣಿಜ್ಯ ಮಂಡಳಿ ಈ ಟೈಟಲ್ ರಿಜಿಸ್ಟರ್ ಮಾಡಲು ಹಿಂದೇಟು ಹಾಕಿದೆ. ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿ ನೋಂದಣಿಗೆ ಅವಕಾಶ ನೀಡಿಲ್ಲ ಎಂದು ಫೇಸ್ಬುಕ್ನಲ್ಲಿ ನಿರ್ದೇಶಕ ರಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಏಕೆ ಹೆಸರು ನೀಡಲು ಸಾಧ್ಯವಿಲ್ಲ ಎಂಬುದಕ್ಕೆ ಸ್ಪಷ್ಟ ಕಾರಣವನ್ನು ಸಹ ಮಂಡಳಿ ನೀಡಿಲ್ಲವೆಂದು ಆರೋಪಿಸಿದ್ದಾರೆ.
‘ಡಿ ಗ್ಯಾಂಗ್’ ಎನ್ನುವ ಹೆಸರಿಗಾಗಿ ಫಿಲ್ಮ್ ಛೇಂಬರ್ ನಲ್ಲಿ ವಿಚಾರಿಸಿದಾಗ ಈ ಹೆಸರಿನ ಟೈಟಲ್ ಅನ್ನು ಯಾರು ಕೂಡ ನೊಂದಣಿ ಮಾಡಿರಲಿಲ್ಲ. ನಾವು ಈ ಟೈಟಲ್ ನ ಮೇಲೆ ಸುಮಾರು ಎರಡು ವರ್ಷಗಳಿಂದ ಕೆಲಸ ಮಾಡಿದ್ದೇವೆ. ಅದಕ್ಕೆ ಸಾಕ್ಷಿಯಾಗಿ ಯೂಟ್ಯೂಬ್ ನಲ್ಲಿ ‘ಡಿ ಗ್ಯಾಂಗ್’ ಎನ್ನುವ ಹಾಡು ಬಿಡುಗಡೆ ಆಗಿದೆ.
ಈಗ ನಡೆಯುತ್ತಿರುವ ದರ್ಶನ್ ಅವರ ಪ್ರಕರಣಕ್ಕೂ ನಮ್ಮ ಟೈಟಲ್ಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ನಮ್ಮ ಟೈಟಲ್ ಅನ್ನು ಯಾವ ಕಾರಣಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅವರು ನೊಂದಣಿ ಮಾಡಿಕೊಳ್ಳಲು ಆಗುವುದಿಲ್ಲ ಎಂದರು ಎನ್ನುವುದು ನನಗೆ ಅರ್ಥವಾಗಲಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ನಿರ್ಮಾಪಕರಿಗೆ ಅಥವಾ ದೊಡ್ಡ ನಿರ್ದೇಶಕರಿಗೆ ಈ ಟೈಟಲ್ ಕೊಟ್ಟರೆ. ಆಗ ಮಾತಾನಾಡಲು ಸಾಕ್ಷಿ ಬೇಕು ಎನ್ನುವ ಕಾರಣಕ್ಕೆ ಈ ವಿಷಯವನ್ನು ಇಲ್ಲಿ ತಿಳಿಸಲು ಇಷ್ಟಪಡುತ್ತೇನೆ’ ಎಂದು ‘ಡಿ ಗ್ಯಾಂಗ್’ ಸಿನಿಮಾವನ್ನು ನಿರ್ದೇಶಿಸಲು ಬಯಸಿರುವ ರಾಖಿ ಸೊಮ್ಲಿ ಎಂಬುವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಚಿತ್ರತಂಡ ಹೇಳಿಕೊಂಡಿರುವಂತೆ ‘ಡಿ ಗ್ಯಾಂಗ್’ ಹೆಸರನ್ನಿಟ್ಟುಕೊಂಡೇ ಅವರು ಕತೆ, ಚಿತ್ರಕತೆ ರಚಿಸಿಕೊಂಡಿದ್ದಾರೆ. ಅಲ್ಲದೆ ಅವರು ಹೇಳಿಕೊಂಡಿರುವಂತೆ, ದರ್ಶನ್ ಕುರಿತು ಈಗ ನಡೆಯುತ್ತಿರುವ ಘಟನೆಗಳಿಗೂ ಅವರ ಸಿನಿಮಾಕ್ಕೂ ಸಂಬಂಧವಿಲ್ಲ. ಅವರ ಸಿನಿಮಾದ ಕತೆ ರೇಣುಕಾ ಸ್ವಾಮಿ ಕೊಲೆಯನ್ನು ಆಧರಿಸಿದ್ದಲ್ಲ. ಆದರೂ ಸಹ ಮಂಡಳಿಯವರು ಸಿನಿಮಾ ಟೈಟಲ್ ನೀಡಲು ನಿರಾಕರಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿರುವ ಕಾರಣ ಟೈಟಲ್ ನೀಡಲಾಗುವುದಿಲ್ಲ ಎಂದು ಹೇಳಿದ್ದಾರಂತೆ ಅಧ್ಯಕ್ಷರು.
ಇದನ್ನೂ ಓದಿ : ಖ್ಯಾತ ಹಿರಿಯ ಸಾಹಿತಿ ನಾಡೋಜ ಕಮಲಾ ಹಂಪನಾ ನಿಧನ..!