ಬೆಂಗಳೂರು : ಲೋಕಸಭೆ ಚುನಾವಣೆ ಬಳಿಕ ಕರ್ನಾಟಕದ ಮೊದಲ ವಿಧಾನಮಂಡಲ ಅಧಿವೇಶನ ಇಂದು ಆರಂಭವಾಗಿದೆ. ಅಧಿವೇಶನ ಇಂದಿನಿಂದ ಜುಲೈ 26ರವರೆಗೆ ನಡೆಯಲಿದೆ. ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ, ವಾಲ್ಮೀಕಿ ನಿಗಮದಲ್ಲಿನ 187 ಹಗರಣ ಆರೋಪ ಬಿಜೆಪಿಗೆ ಅಸ್ತ್ರವಾಗಿದೆ. ಇದೆ ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ವಾಲ್ಮೀಕಿ ಹಗರಣ ಕುರಿತು ಚರ್ಚೆಗೆ ಸ್ಪೀಕರ್ ನಿಯಮ 69ರಡಿ ಅವಕಾಶ ನೀಡಿದರು. ಹಗರಣ ಕುರಿತು ಚರ್ಚೆ ಆರಂಭಿಸಿದ ಆರ್. ಅಶೋಕ್ ಅವರು, ದಲಿತರ ಹಣ ಲೂಟಿ ಹೊಡೆದು ಬೇರೆ ರಾಜ್ಯಗಳಿಗೆ ಹಣ ಕೊಡಲಾಗಿದೆ. ಈ ರೀತಿಯ ಹಗರಣ ರಾಜ್ಯದಲ್ಲಿ ಇದೇ ಮೊದಲು. ಕಟಾಕಟ್ ಅಂತಾ ನೂರಕ್ಕೆ ನೂರು ದಲಿತರ ಹಣ ಲೂಟಿ ಆಗಿದೆ. ಇದು ಕರ್ನಾಟಕ ಇತಿಹಾಸಕ್ಕೆ ಕಪ್ಪುಚುಕ್ಕೆ ಎಂದಿದ್ದಾರೆ.
ಇನ್ನೂ ನಿಗಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ. 187 ಕೋಟಿ ಹಣ ಕಟಾಕಟ್ ಆದಾಗ ಸರ್ಕಾರ ಕಣ್ಮುಚ್ಚಿಕೊಂಡಿತ್ತಾ. ಸರ್ಕಾರದ ಹೆಡ್ಮಾಸ್ಟರ್ ಸಿಎಂ ಅವರೇ ಕೈಚೆಲ್ಲಿ ಕೂತ್ರೆ ಹೇಗೆ? ಎಂದು ವಾಲ್ಮೀಕಿ ಸ್ಕ್ಯಾಮ್ ಕುರಿತು ವಿಧಾನಸಭೆಯಲ್ಲಿ ಆರ್. ಅಶೋಕ್ ಗುಡುಗಿದ್ದಾರೆ.
ಇನ್ನು ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾ ನಿರತ ಬಿಜೆಪಿ ನಾಯಕರು ಆಗ್ರಹಿಸಿದರು. ಸದನದ ಬಾವಿಗಿಳಿದು ರಾಜ್ಯ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ರಕ್ಷಕರೇ ಭಕ್ಷಕರಾಗಿದ್ದಾರೆ ಅನ್ನೋ ಸಿ.ಟಿ. ರವಿ ಮಾತಿಗೆ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು. ಗದ್ದಲದ ಹಿನ್ನೆಲೆಯಲ್ಲಿ 10 ನಿಮಿಷ ಸದನ ಮುಂದೂಡಿಕೆ ಮಾಡಲಾಗಿತ್ತು. ಸಿ.ಟಿ. ರವಿ ಮಾತಿಗೆ ಯತೀಂದ್ರ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರೇ, ಯು.ಜಿ. ವೆಂಕಟೇಶ್ ಬಿಜೆಪಿ ಸದಸ್ಯರ ಮೇಲೆ ಕಿಡಿಕಾರಿದರು. 2 ಪಕ್ಷಗಳ ಸದಸ್ಯರ ಗದ್ದಲ ನಡುವೆ ಮಧ್ಯೆಪ್ರವೇಶಿಸಿದ ಸಭಾಪತಿ ಗದ್ದಲ ಮಾಡೋರ ವಿರುದ್ಧ ಕ್ರಮಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದರು. ಎಚ್ಚರಿಕೆಗೂ ಮಣಿಯದ ಹಿನ್ನೆಲೆಯಲ್ಲಿ ಕಲಾಪ ಮುಂದೂಡಿಕೆ ಮಾಡಲಾಗಿತ್ತು.
ಇದನ್ನೂ ಓದಿ : ಬಾಲಿವುಡ್ನಲ್ಲಿ ಬ್ಯುಸಿಯಾದ ಇತಿ ಆಚಾರ್ಯ – ಬರ್ತಡೇ ದಿನವೇ ಹೊಸ ಚಿತ್ರದ ಅಪ್ಡೇಟ್ ಕೊಟ್ಟ ಕನ್ನಡತಿ..!