ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇಂದು ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ದೊಡ್ಡ ದಂಡೇ ಇದೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಹೈಕಮಾಂಡ್ ಜೊತೆ ಚರ್ಚಿಸಲು ಇಂದು ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಲಿದ್ದಾರೆ.
ಜೂ.13ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಥಾನದ ಬಲದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ 7 ಮಂದಿಯನ್ನು ಆಯ್ಕೆ ಮಾಡಲು ಅವಕಾಶವಿದೆ. ಈ ಏಳು ಸ್ಥಾನಗಳಿಗೆ ಅಭ್ಯರ್ಥಿಗಳ ಸಂಖ್ಯೆ ವಿಪರೀತವಾಗಿರುವುದರಿಂದ ಸಂಭಾವ್ಯರ ಪಟ್ಟಿಯಲ್ಲಿ 15-20 ಮಂದಿ ಹೆಸರು ಫೈನಲ್ ಮಾಡಿಕೊಂಡು ಸಿಎಂ,ಡಿಸಿಎಂ ವಿಮಾನ ಹತ್ತಲಿದ್ದಾರೆ.
ಇನ್ನು ಏಳು ಸ್ಥಾನಕ್ಕಾಗಿ 100ಕ್ಕೂ ಅಧಿಕ ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದು, ಹಲವರು ಮಂತ್ರಿಗಳ ಮೂಲಕ ಲಾಬಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಡಿಸಿಎಂ, ಸಿಎಂ ಮೂಲಕವೂ ಒತ್ತಡ ಹೇರುತ್ತಿದ್ದಾರೆ. ಸಮುದಾಯವಾರು, ಜಾತಿವಾರು, ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಂತೆ ಸಿಎಂ ಹಾಗೂ ಡಿಸಿಎಂ ಬಳಿ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ಗೆ ಲಭಿಸಲಿರುವ ಏಳು ಎಂಎಲ್ಸಿ ಸ್ಥಾನಗಳಿಗೆ ಕೈ ಪಾಳಯದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಸಿಎಂ, ಡಿಸಿಎಂ ಸಂಭವನೀಯರ ಪಟ್ಟಿ ಸಮೇತ ಇಂದು ದೆಹಲಿಗೆ ಹೋಗ್ತಿದ್ದಾರೆ. ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರ ಹೆಸರು ಕೇಳಿ ಬರ್ತಿದೆ. ಯಾವ ಸಮುದಾಯಕ್ಕೆ, ಯಾವ ಪ್ರದೇಶಕ್ಕೆ ಎಷ್ಟು ಸ್ಥಾನ ಕೊಡ್ಬೇಕು? ಯಾರನ್ನು ಗೆಲ್ಲಿಸಿಕೊಂಡರೆ ಪಕ್ಷ ಸಂಘಟನೆಗೂ ಲಾಭ ಅನ್ನೋ ಲೆಕ್ಕಾಚಾರ ಮಾಡಲಾಗಿದೆ. ಸಚಿವ ಬೋಸರಾಜು ಆಯ್ಕೆಯಾಗುವುದು ಬಹುತೇಕ ಅಂತಿಮ ಎಂದು ಹೇಳಲಾಗುತ್ತಿದೆ. OBC-2, ಲಿಂಗಾಯತ, ಒಕ್ಕಲಿಗ, ಮುಸ್ಲಿಂ, ಕ್ರಿಶ್ಚಿಯನ್, SC-STಗೆ ತಲಾ 1 ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ರೀ ಎಂಟ್ರಿ ಡೇಟ್ ಫಿಕ್ಸ್ - SIT ಅಧಿಕಾರಿಗಳ ಟೀಂ ಫುಲ್ ಅಲರ್ಟ್..!