ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸದ್ಯ ಕೋರ್ಟ್ನಲ್ಲಿ ರಿಲೀಫ್ ಪಡೆದು ರಾಜ್ಯಪಾಲರ ಜೊತೆ ಸಿಎಂ ಸಿದ್ದರಾಮಯ್ಯ ಜಿದ್ದಿಗೆ ಬಿದ್ದಿದ್ದಾರೆ.
ಮುಡಾದಲ್ಲಿ ತಮ್ಮನ್ನ ಜೈಲಿಗಟ್ಟಲು ಸಾಲುಗಟ್ಟಿ ನಿಂತ ಕಮಲ-ದಳ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಶಾಕ್ ಕೊಡಲು ಮುಂದಾಗಿದ್ದು, ಹೈಕಮಾಂಡ್ ಮಟ್ಟದಲ್ಲೂ ಹೋರಾಟಕ್ಕೆ ರಣತಂತ್ರ ರಚಿಸಲು ಇಂದು ದೆಹಲಿಯಾತ್ರೆ ಮಾಡುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂಗೆ ಸಾಥ್ ನೀಡಲಿದ್ದು, ಬೆಳಗ್ಗೆ 11 ಗಂಟೆಗೆ ಹೆಚ್ಎಎಲ್ನಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಸಿಎಂಗೆ ಶಾಸಕರ ಸಂಪೂರ್ಣ ಬೆಂಬಲ ಸಿಕ್ಕಿದ್ದು, ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ. ಮುಂದೆಯೂ ಜೊತೆ ನಿಲ್ಲುತ್ತೇವೆ. ನೀವು ತಪ್ಪು ಮಾಡಿಲ್ಲ ಎಂದು ನಮಗೆಲ್ಲಾ ಸಂಪೂರ್ಣ ವಿಶ್ವಾಸ ಇದೆ ಎಂದು ಶಾಸಕರು ಸಿಎಂ ಬೆನ್ನಿಗೆ ನಿಂತಿದ್ದಾರೆ. ಇದೀಗ 135 ಶಾಸಕರ ಒಕ್ಕೊರಲ ಧ್ವನಿಯಿಂದ ಸಿಎಂ ಸಿದ್ದುಗೆ ಆನೆ ಬಲ ಬಂದಿದ್ದು, ಇದೇ ನಿಟ್ಟಿನಲ್ಲಿ ಸಿಎಂ, ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ದೆಹಲಿ ಹೊರಟಿದ್ದಾರೆ. ದೆಹಲಿ ಮಟ್ಟದಲ್ಲಿ ರಾಜ್ಯಪಾಲರ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಲು ಹೈ ನಾಯಕರ ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಇನ್ನು ರಾಜ್ಯಪಾಲರ ವಾಪಸ್ ಕರೆಸಲು ಕೇಂದ್ರದ ಮೇಲೆ ಒತ್ತಡ ಹಾಕಲು ಚಿಂತನೆ ನಡೆಸಲಾಗಿದೆ. ಕೈ ನಾಯಕರು ರಾಷ್ಟ್ರಪತಿಗಳ ಮುಂದೆ ಶಾಸಕರ ಪರೇಡ್ಗೆ ತೀರ್ಮಾನ ಮಾಡಿದ್ದು, 135 MLAಗಳನ್ನು ದಿಲ್ಲಿಗೆ ಕರೆದೊಯ್ಯಲು ಪ್ಲಾನ್ ಕೂಡ ನಡೆದಿದೆ. ಹೈಕಮಾಂಡ್ ಒಪ್ಪಿದ್ರೆ ಮುಂದಿನ ವಾರ ಪರೇಡ್ ನಡೆಯಲಿದೆ. ರಾಷ್ಟ್ರಪತಿಭವನದಲ್ಲಿ ಪರೇಡ್ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಈ ಮೂಲಕ ರಾಜ್ಯಪಾಲರ ವಿರುದ್ಧ ಮತ್ತೊಂದು ರೀತಿಯ ಸಮರಕ್ಕೆ ಹಸ್ತ ನಾಯಕರು ಅಣಿಯಾಗುತ್ತಿದ್ದಾರೆ. ಶಾಸಕರ ಪರೇಡ್ ಬಗ್ಗೆ ಬಿಟಿವಿಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಉಡುಪಿ : ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ವಂಚನೆ – ನಾಲ್ವರು ಆರೋಪಿಗಳ ಬಂಧನ..