ಡೆಲಿವರಿ ಬಾಯ್ಗಳು ಮಳೆ, ಬಿಸಿಲು, ತಡ ರಾತ್ರಿ ಸೇರಿದಂತೆ ಯಾವುದೇ ಸಮಯದಲ್ಲೂ ಗ್ರಾಹಕರಿಗೆ ಡೆಲಿವರಿ ಮಾಡುತ್ತಾರೆ. ಹೀಗೆ ತನ್ನ ಎಲ್ಲಾ ಸಂಕಷ್ಟ, ಅಡೆ ತಡೆಗಳ ನಡುವೆ 19 ವರ್ಷದ ಡೆಲಿವರಿ ಬಾಯ್ ಉತ್ಪನ್ನ ಡೆಲಿವರಿ ಮಾಡಿದ್ದ. ಆದರೆ ಈ ಡೆಲಿವರಿ ಕೊಂಚ ತಡವಾಗಿದ್ದಕ್ಕೆ ಮಹಿಳಾ ಗ್ರಾಹಕಿ ಉಗಿದು ಉಪ್ಪಿನಕಾಯಿ ಹಾಕಿದ್ದಾಳೆ. ಮಹಿಳೆಯ ಬೈಗುಳದಿಂದ ಬೇಸತ್ತ ಡೆಲಿವರಿ ಬಾಯ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ.
ಬಿಕಾಂ ವ್ಯಾಸಾಂಗ ಮಾಡುತ್ತಿದ್ದ ಯುವಕ ತನ್ನ ಶಿಕ್ಷಣ ಸೇರಿದಂತೆ ಇತರ ಅಗತ್ಯಕ್ಕಾಗಿ ಪಾರ್ಟ್ ಟೈಮ್ ಆಗಿ ಕೆಲಸ ಮಾಡುತ್ತಿದ್ದ. ಹೀಗಿರುವಾಗ ಸೆ.11ರಂದು ಯುವಕ ಕೊರತ್ತೂರಿನಿಂದ ಬಂದಿರುವ ಆರ್ಡರ್ ಡೆಲಿವರಿ ಮಾಡಲು ತೆರಳಿದ್ದಾನೆ. ಸ್ಥಳಕ್ಕೆ ತಲುಪಿದರೂ ಮನೆ ಗುರುತಿಸಲು ಕಷ್ಟವಾಗಿದೆ. ಲೊಕೇಶನ್ ಬಳಿ ತಲುಪಿದರೂ ಮನೆ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಮನೆ ಹುಡುಕಲು ಕೆಲ ಹೊತ್ತು ತೆಗೆದುಕೊಂಡಿದ್ದಾನೆ.
ತಡವಾಗಿ ಡೆಲಿವರಿ ಮಾಡಿದ ಕಾರಣಕ್ಕೆ ಮಹಿಳೆ ಹಿಗ್ಗಾ ಮುಗ್ಗಾ ಬೈದಿದ್ದಾಳೆ. ತನ್ನ ಸಮಯ ವ್ಯರ್ಥ ಮಾಡಿರುವುದಾಗಿ ಆಕ್ರೋಶ ಹೊರಹಾಕಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ, ಕಂಪನಿಗೆ ಕರೆ ಮಾಡಿ ಡೆಲಿವರಿ ಬಾಯ್ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಡೆಲಿವರಿ ಬಾಯ್ಗೆ ವಿಳಾಸ ಹುಡುಕಲು ಗೊತ್ತಿಲ್ಲ, ಈತನ ಡೆಲಿವರಿ ಮಾಡಲು ಕಳುಹಿಸಬೇಡಿ ಎಂದು ಕಂಪನಿಗೆ ದೂರು ದಾಖಲಿಸಿದ್ದಾಳೆ. ಮಹಿಳೆಯ ಬೈಗುಳದ ಬಳಿಕ ಕರ್ತವ್ಯ ಮುಗಿಸಿ ಮರಳಿದ ಯುವಕ ತೀವ್ರವಾಗಿ ನೊಂದುಕೊಂಡಿದ್ದ.
ಕೆಲ ದಿನಗಳಿಂದ ಈ ಘಟನೆಯಿಂದ ಹೊರಬರದ ಡೆಲಿವರಿ ಬಾಯ್ ಆಕ್ರೋಶ ತೀರಿಸಲು ಮುಂದಾಗಿದ್ದಾನೆ. 19ರ ಹರೆಯದ ಈತ ನೇರವಾಗಿ ಮಹಿಳೆ ಮನೆಯ ಬಳಿ ತೆರಳಿದ್ದಾನೆ. ಬಳಿಕ ಮಹಿಳೆಯ ಮನೆ ಮೇಲೆ ಕಲ್ಲು ತೂರಿದ್ದಾನೆ. ಕಲ್ಲು ತೂರಾಟದ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ. ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಯುವಕನನ್ನು ಠಾಣೆಗೆ ಕರೆದು ವಾರ್ನಿಂಗ್ ಮಾಡಿದ್ದಾರೆ. ವಿದ್ಯಾರ್ಥಿ ಆಗಿದ್ದ ಕಾರಣ ಪೊಲೀಸರು ವಾರ್ನಿಂಗ್ ನೀಡಿ ಬಿಟ್ಟು ಕಳುಹಿಸಿದ್ದಾರೆ. ಎಲ್ಲಾ ಘಟನೆಗಳಿಂದ ವಿದ್ಯಾರ್ಥಿ ತೀವ್ರವಾಗಿ ನೊಂದಿದ್ದಾನೆ. ಅಂತಿಮ ಎರಡು ದಿನ ಕಾಲೇಜಿಗೂ ತೆರಳಿಲ್ಲ, ಡೆಲಿವರಿ ಎಜೆಂಟ್ ಕೆಲಸಕ್ಕೂ ಹಾಜರಾಗದೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಚಲಿಸುತ್ತಿದ್ದ ಕ್ರೂಸರ್ ವಾಹನದ ಟೈಯರ್ ಬ್ಲಾಸ್ಟ್ – 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ..!