ಬೆಂಗಳೂರು : ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಕರ್ನಾಟಕದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ 21 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಬಿಜೆಪಿ ಘೋಷಣೆ ಮಾಡಿದ್ದು, ಸೀಟು ಹಂಚಿಕೆಯ ಹಿನ್ನೆಲೆಯಿಂದಾಗಿ ಇದೀಗ ಮಿತ್ರ ಬಿಜೆಪಿ ಮೇಲೆ ಸ್ನೇಹಿತ ಜೆಡಿಎಸ್ ಫುಲ್ ಗರಂ ಆಗಿದೆ. ದಳಪತಿಗಳು ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ. ಭಾರೀ ಅಸಮಾಧಾನದಿಂದಾಗಿ ಇದೀಗ ಮೈತ್ರಿಕೂಟದಲ್ಲಿ ಬಿರುಕು ಮೂಡಿಸುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸೀಟು ಹಂಚಿಕೆಯ ಬಗ್ಗೆ ನಿನ್ನೆ ಅಮಿತ್ ಶಾ ಮುಂದೆ ಮಾಜಿ ಸಿಎಂ ಹೆಚ್ಡಿಕೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏನೂ ಕೇಳ್ತಿಲ್ಲ.. ಏನೂ ಹೇಳ್ತಿಲ್ಲ.. ಎಲ್ಲಾ ಅವರ ಮೂಗಿನ ನೇರಕ್ಕೇ ನಡೀತಿದೆ, ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ನಮ್ಮ ಗಮನಕ್ಕೂ ತಂದಿಲ್ಲ. ಮೈತ್ರಿಯಾಗಿ 6 ತಿಂಗಳು ಕಳೆದರೂ ನಮ್ಮ ಜೊತೆ ಚರ್ಚೆ ಮಾಡಿಲ್ಲ, ಜೆಡಿಎಸ್ ಬಲಾಢ್ಯವಾದ ಕ್ಷೇತ್ರಗಳಲ್ಲೂ ಏಕಾಏಕಿ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ತುಮಕೂರು, ಮೈಸೂರು ಅಭ್ಯರ್ಥಿ ಬಗ್ಗೆ ನಮ್ಮ ಜೊತೆ ಚರ್ಚಿಸಬೇಕಿತ್ತು ಎಂದು ಅಮಿತ್ ಶಾ ಅವರಿಗೆ ಮಾಜಿ ಸಿಎಂ ಹೆಚ್ಡಿಕೆ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ, ತುಮಕೂರಿನಲ್ಲಿ ಚಿಹ್ನೆ, ಅಭ್ಯರ್ಥಿ ಎಕ್ಸ್ಚೇಂಜ್ ಆಗಬೇಕಿತ್ತು. ಆದರೆ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಘೋಷಣೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ, ಈ ಹಿಂದೆ ಕೊಡ್ತೀವಿ ಎಂದಿದ್ದ ಕೋಲಾರಕ್ಕೂ ಈಗ ಬಿಜೆಪಿ ಕ್ಯಾತೆ ತಗೆದಿದೆ. ಚಿಕ್ಕಬಳ್ಳಾಪುರದ ಬಗ್ಗೆಯೂ ಸ್ಪಷ್ಟ ತೀರ್ಮಾನ ಮಾಡಿಲ್ಲ, ಕೇವಲ ಎರಡು ಕ್ಷೇತ್ರಕ್ಕೋಸ್ಕರ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕಿತ್ತಾ..? ಎಂದು ಹೆಚ್ಡಿಕೆಯವರು ಅಮಿತ್ ಶಾ ಮುಂದೆ ತೀವ್ರವಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಅತೃಪ್ತಿಗೆ ಕಾರಣ..?
- ಮೈತ್ರಿ ಸೀಟ್ ಹಂಚಿಕೆ ಫೈನಲ್ ಆಗದೇ ಅಭ್ಯರ್ಥಿ ಘೋಷಣೆ
- ಜೆಡಿಎಸ್ ಜತೆ ಚರ್ಚಿಸದೇ 21 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ
- ಮೈತ್ರಿ ಚರ್ಚೆಯಾಗಿ 6 ತಿಂಗಳಾದರೂ ಸೀಟು ಹಂಚಿಕೆ ಆಗಿಲ್ಲ
- ಬೆಂಗಳೂರು ಗ್ರಾಮಾಂತರ, ತುಮಕೂರು ವಿಚಾರದಲ್ಲಿ ಸೂತ್ರ ಬದಲು
- ಅಭ್ಯರ್ಥಿ ಹಾಗೂ ಚಿಹ್ನೆ ವಿನಿಮಯ ಸೂತ್ರ ಪಾಲನೆ ಮಾಡಿಲ್ಲ
- ತುಮಕೂರಿನಲ್ಲಿ ಬಿಜೆಪಿಯಿಂದಲೇ ಅಭ್ಯರ್ಥಿ ಘೋಷಣೆ
- ಬೆಂಗಳೂರು ಗ್ರಾಮಾಂತರದಲ್ಲೂ ಜೆಡಿಎಸ್ ಬದಲು ಬಿಜೆಪಿಗೆ ಟಿಕೆಟ್
- ಕೋಲಾರ ಕ್ಷೇತ್ರದ ವಿಚಾರದಲ್ಲೂ ಬಿಜೆಪಿ ತನಗೇ ಬೇಕೆನ್ನುತ್ತಿದೆ
- ಮಂಡ್ಯ, ಹಾಸನ, ಕೋಲಾರ ಬಿಟ್ಟುಕೊಡುವ ಚಿಂತನೆ ಆಗಿತ್ತು
- ಅಂತಿಮ ತೀರ್ಮಾನವೇ ಆಗದೇ ಅಭ್ಯರ್ಥಿ ಪಟ್ಟಿ ಘೋಷಣೆ
ಇದನ್ನೂ ಓದಿ : ನಿಯಮ ಉಲ್ಲಂಘಿಸಿ ಭೂ ಪರಿವರ್ತನೆಗೆ ಸರ್ಕಾರಕ್ಕೆ ಪ್ರಸ್ತಾವನೆ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಸಸ್ಪೆಂಡ್..!