ಮಂಗಳೂರು : ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುದಕ್ಕೂ ಮೊದಲೇ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಜಿ.ವಿ ರಾಜೇಶ್ ಅವರಿಗೆ ಕೊಕ್ ನೀಡಲಾಗಿದೆ. ದಿಢೀರ್ ಆಗಿ ಹುದ್ದೆಯಿಂದ ತೆಗೆದು ಹಾಕಿರುವುದು ಕರಾವಳಿಯ ಸಂಘ ಪರಿವಾರದೊಳಗೆ ತೀವ್ರ ಚರ್ಚೆಗೀಡಾಗಿದೆ.
ಆರ್ಎಸ್ಎಸ್ನಲ್ಲಿ ಪ್ರಚಾರಕ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಮೂಲದ ರಾಜೇಶ್ ಅವರನ್ನು 2022 ಜುಲೈನಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಇದೀಗ ಅವಧಿಗೂ ಮುನ್ನವೇ ಜವಾಬ್ದಾರಿಯುತ ಸ್ಥಾನದಿಂದ ಅವರನ್ನು ಕೆಳಗಿಳಿಸಲಾಗಿದೆ. ಇನ್ನು, RSS ಸಹ ಸಂಸ್ಥೆ ‘ಸಾಮರಸ್ಯ’ದ ಜವಾಬ್ದಾರಿಯನ್ನು ಜಿ.ವಿ ರಾಜೇಶ್ ಅವರಿಗೆ ನೀಡಲಾಗಿದೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಉತ್ತರ ಕರ್ನಾಟಕ ಭಾಗದ ಆರ್ಎಸ್ಎಸ್ ಪ್ರಮುಖರನ್ನು ನೇಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ದಿಢೀರ್ ಕಿಕ್ ಔಟ್ ಮಾಡಿದ್ದೇಕೆ? ಪಕ್ಷದ ಹಿರಿಯರು, ಹಲವು ಮಾಜಿ ಮುಖ್ಯಮಂತ್ರಿಗಳ ಜತೆಗೆ ಸಮನ್ವಯ ಸಾಧಿಸುವುದರ ಜತೆಗೆ ಸಂಘ ಮತ್ತು ಪಕ್ಷದ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಹೊಣೆ ಜಿ.ವಿ ರಾಜೇಶ್ ಅವರದ್ದಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಯಂತಹ ಮೂಲ ಬಿಜೆಪಿಗರು ಪಕ್ಷ ಬಿಟ್ಟು ಹೋದರು. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಅರುಣುಕುಮಾರ ಪುತ್ತಿಲ ಅವರು ‘ಪುತ್ತಿಲ ಪರಿವಾರ’ ರಚಿಸಿಕೊಂಡು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾದರು.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷನ ಅಣ್ಣನೇ ಸ್ಪರ್ಧಿಸಿದ್ದ ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಬಂಡಾಯ ಸ್ಪರ್ಧೆ, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ರಘುಪತಿ ಭಟ್ ಸ್ಪರ್ಧೆ ಇವೆಲ್ಲ ಬೆಳವಣಿಗೆಳು ನಡೆಯುತ್ತಿದ್ದರೂ, ಗಮನಿಸದೇ ಇದ್ದುದು ರಾಜೇಶ್ ಅವರ ವೈಫಲ್ಯ ಎಂದೇ ಹೇಳಲಾಗುತ್ತಿದೆ. ಸಂಘ ನಿಷ್ಠರಾಗಿದ್ದ ಅನೇಕರು ಪಕ್ಷ ತೊರೆಯುವ, ಬಂಡಾಯ ಏಳುವುದರ ಬಗ್ಗೆ ಮುಂಜಾಗ್ರತೆ ವಹಿಸಿ, ಹಿರಿಯರ ಜತೆ ಚರ್ಚಿಸಿ ಮಾತುಕತೆ ಮೂಲಕ ಬಗೆಹರಿಸುವ, ರಾಜಕೀಯ ಸವಾಲುಗಳನ್ನು ಪರಿಹರಿಸುವ ಹೊಣೆಯೂ ಸಂಘಟನಾ ಕಾರ್ಯದರ್ಶಿ ಅವರ ಮೇಲಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸದೇ ಇರುವುದು ರಾಜೇಶ್ ಬದಲಾವಣೆಗೆ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಪಾಗಲ್ ಪ್ರೇಮಿ ಹುಚ್ಚಾಟ ಪ್ರಕರಣ – ಆರೋಪಿ ಅರೆಸ್ಟ್..!