ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ತೀವ್ರ ವಿರೋಧದ ನಡುವೆ ಜಗದೀಶ್ ಶೆಟ್ಟರ್ಗೆ ಬೆಳಗಾವಿ ಟಿಕೆಟ್ ಘೋಷಣೆ ಮಾಡಲಾಗಿದೆ.
ಕರ್ನಾಟಕದ ನಾಲ್ಕು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೀಗಿವೆ :
- ರಾಯಚೂರು ಲೋಕಸಭಾ ಕ್ಷೇತ್ರ – ರಾಜಾ ಅಮರೇಶ್ವರ ನಾಯಕ
- ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ – ಡಾ.ಕೆ.ಸುಧಾಕರ್
- ಉತ್ತರ ಕನ್ನಡ ಲೋಕಸಭಾ ಕ್ಷೇತ್ರ – ವಿಶ್ವೇಶ್ವರ ಹೆಗಡೆ ಕಾಗೇರಿ (ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಕೈತಪ್ಪಿದ ಟಿಕೆಟ್)
- ಬೆಳಗಾವಿ ಲೋಕಸಭಾ ಕ್ಷೇತ್ರ – ಜಗದೀಶ್ ಶೆಟ್ಟರ್
ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಸಚಿವ ಡಾ.ಕೆ.ಸುಧಾಕರ್ ಪಾಲಾಗಿದೆ. ಕ್ಷೇತ್ರದ ಟಿಕೆಟ್ ತನ್ನ ಪುತ್ರ ಅಲೋಕ್ಗೆ ಕೊಡಿಸಲು ಭಾರೀ ಪ್ರಯತ್ನ ಮಾಡಿದ್ದ ಯಲಹಂಕ ಶಾಸಕ ಎಸ್ಆರ್ ವಿಶ್ವಾನಥ್ ಅವರು ಸುಧಾಕರ್ಗೆ ಟಿಕೆಟ್ ನೀಡದಂತೆ ವಿರೋಧಿ ಅಲೆ ಸೃಷ್ಟಿಸಿದ್ದರು. ಅಲ್ಲದೆ, ಸುಧಾಕರ್ ಮತ್ತು ವಿಶ್ವನಾಥ್ ನಡುವೆ ವಾಗ್ವಾದವೂ ನಡೆದಿತ್ತು. ಕೊನೆಯಲ್ಲಿ ಕ್ಷೇತ್ರದ ಟಿಕೆಟ್ ಸುಧಾಕರ್ಗೆ ನೀಡಲಾಗಿದೆ.
ಉತ್ತರ ಕನ್ನಡ ಕ್ಷೇತ್ರ ಕೂಡ ಭಾರಿ ಕುತೂಹಲ ಕೆರಳಿಸಿತ್ತು. ಹಾಲಿ ಸಂಸದರಾಗಿರುವ ಅನಂತ್ ಕುಮಾರ್ ಹೆಗಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಲರ್ಟ್ ಆಗಿದ್ದರು. ಕ್ಷೇತ್ರದಲ್ಲಿ ಓಡಾಟ, ಹಿಂದುತ್ವದ ಪರ ಭಾಷಣಗಳನ್ನು ಮಾಡಿ ಸಂಚಲನ ಸೃಷ್ಟಿಸಿದ್ದರು. ಇದರ ನಡುವೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿ ಪಕ್ಷದಿಂದ ನೋಟಿಸ್ ಕೂಡ ಪಡೆದುಕೊಂಡಿದ್ದರು. ಮತ್ತೆ ಸ್ಪರ್ಧೆಗೆ ಪ್ರಯತ್ನಿಸಿದ ಅನಂತ್ ಕುಮಾರ್ ಹೆಗೆಡೆಗೆ ಟಿಕೆಟ್ ನಿರಾಕರಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಉತ್ತರ ಕನ್ನಡ ಟಿಕೆಟ್ ನೀಡಲಾಗಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪೆಂಡಿಂಗ್ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಹೈಕಮಾಂಡ್ ಇದ್ದಂತೆ ಕಾಣುತ್ತಿದೆ. ರಘುಚಂದನ್ ಹಾಗೂ ಗೋವಿಂದ ಕಾರಜೋಳ ನಡುವೆ ಟಿಕೆಟ್ಗಾಗಿ ಫೈಟ್ ನಡೆಯುತ್ತಿದೆ. ಆದರೆ, ಕಾರಜೋಳ ಅವರಿಗೆ ಟಿಕೆಟ್ ನೀಡದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ, ರಾಜ್ಯ ನಾಯಕರೊಂದಿಗೆ ಮತ್ತೊಮ್ಮೆ ಚರ್ಚಿಸಿ ಟಿಕೆಟ್ ಘೋಷಿಸಲು ಹೈಕಮಾಂಡ್ ನಿರ್ಧರಿಸಿದೆ.
ಇದನ್ನೂ ಓದಿ :ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಮೊದಲ ಹೋಳಿ ಸಂಭ್ರಮ – ರಾಮಲಾಲ್ಲನ ಕೆನ್ನೆಗೆ ಬಣ್ಣದ ರಂಗು..!