ಬೆಂಗಳೂರು : ಬೆಂಗಳೂರಿನಲ್ಲಿ ನಟ್ಟ ನಡುರಾತ್ರಿ ಮನೆ ಹೊರಗಡೆ ಮಲಗಿದ್ದ ರೌಡಿ ಶೀಟರ್ ಸತೀಶ್ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿವೇಕ್ ನಗರದ ಮಾಯಾ ಬಜಾರ್ ಸ್ಲಂನಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ರೌಡಿ ಶೀಟರ್ನನ್ನು ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶ್ ಎಂದು ಗುರುತಿಸಲಾಗಿದೆ.
ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ ಸತೀಶ್ನನ್ನು ಹಳೆ ದ್ವೇಷದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಮನೆಗೆ ನುಗ್ಗಿ ಕತ್ತಲಲ್ಲಿ ರಾಕ್ಷಸ ಕೃತ್ಯ ಎಸಗಿದ ಹಂತಕರು ಆತನನ್ನು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಮಿಲಿಟ್ರಿ ಸತೀಶ್ ಮಾಯಾ ಬಜಾರ್ ಸ್ಲಂನಲ್ಲಿ ವಾಸಿಸುತ್ತಿದ್ದು, ಮಂಗಳವಾರ ರಾತ್ರಿ ಮನೆಯ ಹೊರಗಡೆ ಮಲಗಿದ್ದ. ಬೆಳಗ್ಗಿನ ಜಾವ ಮೂರು ಗಂಟೆಯ ಹೊತ್ತಿಗೆ ಆತನ ಮನೆಯ ವಠಾರಕ್ಕೆ ಬಂದು ದುಷ್ಕರ್ಮಿಗಳು ಆತನನ್ನು ಕೊಚ್ಚಿ ಪರಾರಿಯಾಗಿದ್ದಾರೆ.
ಅಪ್ಪನ ಮಗ್ಗುಲಲ್ಲೇ ಮಲಗಿದ್ದ ಮಗುವಿನ ಕೈ ಕಿವಿಗೆ ಗಾಯವಾಗಿದೆ. ಅಜ್ಜಿ ಆಸ್ಪತ್ರೆಯಲ್ಲಿ ಮಗುವಿಗೆ ಟ್ರೀಟ್ಮೆಂಟ್ ಕೊಡಿಸುತ್ತಿದ್ದು, ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆ ಬಗ್ಗೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಎಚ್.ಟಿ. ಪ್ರತಿಕ್ರಿಯೆ ನೀಡಿದ್ದು, “ವ್ಯವಸ್ಥಿತ ಸಂಚು ರೂಪಿಸಿ ರಾತ್ರೋರಾತ್ರಿ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿಯ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹಳೇ ವೈಷಮ್ಯ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ಇದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಹಿರೇಮಗಳೂರು ಕಣ್ಣನ್ಗೆ ನೋಟಿಸ್ ವಿಚಾರ – ತಹಶೀಲ್ದಾರ್ ತಪ್ಪಿದೆ ಹೊರತು ಕಣ್ಣನ್ ಅವರ ತಪ್ಪಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..!