ಬೆಂಗಳೂರು : ವಾಟರ್ ಟ್ಯಾಂಕರ್ ಮಾಫಿಯಾಗೆ ಬೆಂಗಳೂರು ಮಹಾನಗರ ಪಾಲಿಕೆ ಕಡಿವಾಣ ಹಾಕಲು ಮುಂದಾಗಿದೆ. ಮಾರ್ಚ್ 7ರೊಳಗೆ ವಾಟರ್ ಟ್ಯಾಂಕರ್ ನೋಂದಣಿ ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ವಾಟರ್ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಬಿಬಿಎಂಪಿಯು, ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಲು ಮುಂದಾಗಿದೆ. ಅಲ್ಲದೆ, ಮಾ.7ರೊಳಗೆ ಟ್ಯಾಂಕರ್ ಮಾಲೀಕರು ಪಾಲಿಕೆಯಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ.
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಟ್ರೇಡ್ ಲೈಸೆನ್ಸ್ ಇರುವ ಟ್ಯಾಂಕರ್ 54 ಇರಬಹುದು. ಸಾರಿಗೆ ಇಲಾಖೆ ಪ್ರಕಾರ 3500 ಟ್ಯಾಂಕರ್ಗಳು ಇವೆ. ನಾವು ಅವರಿಗೆ ಒಂದು ವಾರ ಡೆಡ್ಲೈನ್ ಕೊಡುತ್ತೇವೆ. ಮಾರ್ಚ್ 1ರಿಂದ ಮಾರ್ಚ್ 7ರೊಳಗೆ ನೋಂದಣಿ ಕಡ್ಡಾಯ ಎಂದಿದ್ದಾರೆ.
ಟ್ರೇಡ್ ಲೈಸೆನ್ಸ್ ಪಡೆದೇ ನೀರು ಸರಬರಾಜು ಮಾಡಬೇಕು, ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ ವಶಕ್ಕೆ ಪಡೆಯುತ್ತೇವೆ. ಜೊತೆಗೆ ಟ್ರೇಡ್ ಅಸೋಸಿಯೇಷನ್ ಜೊತೆ ಮಾತನಾಡಿ ದರ ಫಿಕ್ಸ್ ಮಾಡುತ್ತೇವೆ. BWSSB ನೀರನ್ನು ಸರಬರಾಜು ಮಾಡಲಿದೆ ಎಂದು ಕಮಿಷನರ್ ಹೇಳಿದ್ದಾರೆ.
ಇದನ್ನೂ ಓದಿ : ನಟ ಹಾಗೂ ಮಾಜಿ ಐಎಎಸ್ ಅಧಿಕಾರಿ ಕೆ. ಶಿವರಾಮ್ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು..!