Download Our App

Follow us

Home » ಸಿನಿಮಾ » ಶರಣ್ ಅಭಿನಯದ ಬಹುನಿರೀಕ್ಷಿತ ಸಿನಿಮಾ “ಅವತಾರ ಪುರುಷ 2” ಮಾರ್ಚ್ 22ರಂದು ತೆರೆಗೆ..!

ಶರಣ್ ಅಭಿನಯದ ಬಹುನಿರೀಕ್ಷಿತ ಸಿನಿಮಾ “ಅವತಾರ ಪುರುಷ 2” ಮಾರ್ಚ್ 22ರಂದು ತೆರೆಗೆ..!

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸಿಂಪಲ್ ಸುನಿ ನಿರ್ದೇಶನದ ಹಾಗೂ ಶರಣ್ ನಾಯಕರಾಗಿ ನಟಿಸಿರುವ “ಅವತಾರ ಪುರುಷ 2” ಚಿತ್ರ ಮಾರ್ಚ್ 22 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

2022 ರಲ್ಲಿ ತೆರೆಕಂಡ “ಅವತಾರ ಪುರುಷ” ಚಿತ್ರ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು ಎಂದು ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ಎರಡು ವರ್ಷಗಳಿಂದ ಸ್ನೇಹಿತರು ಹಾಗೂ ಅಭಿಮಾನಿಗಳು ಕೇಳುತ್ತಿದ್ದರು. “ಅವತಾರ ಪುರುಷ 2” ಯಾವಾಗ ರಿಲೀಸ್? ಎಂದು. ಈಗ ನಮ್ಮ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಇದೇ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಚಿತ್ರದ ಮೊದಲ ಭಾಗ ನೋಡಿದವರಿಗು ಹಾಗೂ ನೋಡದವರಿಗೂ ಈ ಚಿತ್ರ ಇಷ್ಟವಾಗುವುದಂತು ಖಂಡಿತ. ಅಂತಹ ಉತ್ತಮ ಮನೋರಂಜನಾ ಚಿತ್ರವಿದು. ಶರಣ್ ಅವರು ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಕುಮಾರ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಲಾವಿದರ ಹಾಗೂ ತಾಂತ್ರಿಕವರ್ಗದವರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು.

“ಅವತಾರ ಪುರುಷ 2” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮೋಹನ್ ಅವರು ಚಿತ್ರದ ವಿತರಣೆ ಮಾಡುತ್ತಿದ್ದಾರೆ. ನೋಡುಗರಿಗೆ ಈ ಚಿತ್ರ ಮನೋರಂಜನೆಯ ರಸದೌತಣ ನೀಡುವುದು ಖಚಿತ. ಸದ್ಯದಲ್ಲೇ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಲಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು‌ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

ನಿರ್ದೇಶಕ ಸಿಂಪಲ್ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸಿನಿಮಾ ಪ್ರೀತಿ ನನಗೆ ಬಹಳ ಇಷ್ಟ ಎಂದು ಮಾತು ಆರಂಭಿಸಿದ ನಟ ಶರಣ್, ನನ್ನನ್ನು ಕೂಡ ಬಹಳಷ್ಟು ಜನ “ಅವತಾರ ಪುರುಷ 2” ಯಾವಾಗ ಬಿಡುಗಡೆಯಾಗುತ್ತದೆ? ಎಂದು ಕೇಳುತ್ತಿದ್ದರು. ಚಿತ್ರದ ಎರಡನೇ ಭಾಗ ಇಷ್ಟು ಕುತೂಹಲ ಹುಟ್ಟಿಸಿದೆ ಎಂದರೆ ನಿಜಕ್ಕೂ ಮೊದಲ ಭಾಗ ಎಲ್ಲರಿಗೂ ಇಷ್ಟವಾಗಿದೆ ಎಂದು ಅರ್ಥ. ನಾನು, ನನ್ನ ಯಾವ ಸಿನಿಮಾವನ್ನು ಮೊದಲು ನೋಡುವುದಿಲ್ಲ. ಅಭಿಮಾನಿಗಳ ಜೊತೆಗೆ ಚಿತ್ರಮಂದಿರದಲ್ಲೇ ನೋಡುತ್ತೇನೆ. ಈ ಚಿತ್ರವನ್ನು ನೋಡಲು ನಾನು ಸಹ ಕಾತುರದಿಂದ ಕಾಯುತ್ತಿದ್ದೇನೆ. ಕೆಲವರು ಚಿತ್ರ ಸ್ವಲ್ಪ ತಡವಾಯಿತು ಎನ್ನುತ್ತಿದ್ದಾರೆ. ಹಾಗೆನಿಲ್ಲ. ಮೊದಲ ಭಾಗ ಕೂಡ 22 ರಲ್ಲೇ ಬಿಡುಗಡೆಯಾಗಿತ್ತು. ಇದು ಕೂಡ 22 ರಂದೆ ಬಿಡುಗಡೆಯಾಗುತ್ತಿದೆ. ಮೊದಲ ಭಾಗ 2022 ರಲ್ಲಿ. ಎರಡನೇ ಭಾಗ 2024 ರ ಮಾರ್ಚ್ 22 ರಂದು ಎಂದರು.

ಬಹಳ ದಿನಗಳ ನಂತರ ನನ್ನ ಅಭಿನಯದ ಕನ್ನಡ ಚಿತ್ರ ಬಿಡುಗಡೆಯಾಗುತ್ತಿದೆ. ಒಳ್ಳೆಯ ತಂಡದೊಂದಿಗೆ ಚಿತ್ರ ಮಾಡಿರುವ ಖುಷಿಯಿದೆ. ದಯವಿಟ್ಟು ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದರು ನಟಿ ಆಶಿಕಾ ರಂಗನಾಥ್. ಈ ಚಿತ್ರದಲ್ಲಿ ಕುಮಾರ ಎಂಬ ಪಾತ್ರದಲ್ಲಿ ಅಭಿನಯಿಸಿರುವುದಾಗಿ ನಟ ಶ್ರೀನಗರ ಕಿಟ್ಟಿ ಹೇಳಿದರು. 150 ರಿಂದ 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ವಿತರಕ ಮೋಹನ್ ತಿಳಿಸಿದರು. ಛಾಯಾಗ್ರಹಣದ ಕುರಿತು ಛಾಯಾಗ್ರಾಹಕ ವಿಲಿಯಂ ಡೇವಿಡ್ ಮಾಹಿತಿ ನೀಡಿದರು.

ಇದನ್ನೂ ಓದಿ : ಪಾಕ್ ಪರ ಘೋಷಣೆ ಕೇಸ್ – ಮಹಮ್ಮದ್ ಶಫಿ ನಾಶಿಪುಡಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್..!

 

 

 

 

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here