ಹಾಸನ : ಹಾಸನದ ಕಾಡಾನೆ ಜೊತೆಗಿನ ಕಾದಾಟದಲ್ಲಿ ವೀರ ಮರಣವನ್ನಪ್ಪಿದ ಅರ್ಜುನನಿಗೆ ಸ್ಮಾರಕ ನಿರ್ಮಾಣ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಆನೆ ಕಾರ್ಯಾಚರಣೆಯಲ್ಲಿ ದಸರಾ ಅಂಬಾರಿ ಹೊರುತ್ತಿದ್ದ ಕ್ಯಾಪ್ಟನ್ ಅರ್ಜುನ ಮೃತಪಟ್ಟಿದ್ದ. ಈತನ ಸ್ಮಾರಕ ನಿರ್ಮಾಣ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇನ್ನೂವರೆಗು ಸ್ಮಾರಕ ನಿರ್ಮಾಣವಾಗಿಲ್ಲ.
ನಟ ದರ್ಶನ್ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿ ಗ್ರಾನೈಟ್ ಕಳಿಸಿದ್ರು. ಆದರೆ ಸರ್ಕಾರವೇ ಸ್ಮಾರಕ ನಿರ್ಮಿಸೋದಾಗಿ ಹೇಳಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ನವೀನ್ ಎಂಬಾತ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಲಕ್ಷಾಂತರ ಹಣ ಸಂಗ್ರಹಿಸಿದ್ದಾನೆ. ಕೆ.ಆರ್.ನಗರದ ಮೂಲದ ನವೀನ್ ಎಂಬಾತ ವಾಟ್ಸಾಪ್ ಗ್ರೂಪ್ ರಚಿಸಿ ಹಣ ಸಂಗ್ರಹಕ ಮಾಡಿದ್ದಾನೆ. ವಾಟ್ಸಾಪ್ಗಳಲ್ಲಿ QR ಕೋಡ್ ಕಳಿಸಿ ನವೀನ್ ಹಣ ಸಂಗ್ರಹ ಮಾಡ್ತಿದ್ದ. ರಾಜ್ಯದ ವಿವಿಧ ಮೂಲೆಗಳಿಂದ ಜನರು ಹಣ ಹಾಕಿದ್ದರು. ಅದರ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹರಿದಾಡುತ್ತಿವೆ.
ವಾಟ್ಸಾಪ್ ಗ್ರೂಪ್ನಲ್ಲಿ ಲಕ್ಷ-ಲಕ್ಷ ಹಣ ಸಂಗ್ರಹಿಸಲಾಗಿದೆ, ಲೆಕ್ಕ ಕೊಡ್ತಿಲ್ಲ ಎಂದು ಮಲೆನಾಡು ರಕ್ಷಣಾ ಸೇನೆಯ ಸಾಗರ್ ಎಂಬಾತ ಬಹಿರಂಗ ಆರೋಪ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನೇರವಾಗಿ ಪ್ರಶ್ನಿಸಿದ್ದರು. ಆಗ ನವೀನ್, ನಾವು ಯಾರನ್ನೂ ಹಣ ಕೊಡುವಂತೆ ಒತ್ತಡ ಮಾಡಿಲ್ಲ. ಇಷ್ಟ ಇದ್ದವರು ಮಾತ್ರ ಅರ್ಜುನನ ಸ್ಮಾರಕಕ್ಕೆ ಹಣ ನೀಡಬಹುದು. ಇದು ತಾತ್ಕಾಲಿಕ ಸ್ಮಾರಕ ಎಂದು ಸ್ಪಷ್ಟನೆ ನೀಡಿ ಲೆಕ್ಕ ನೀಡಲು ಹಿಂದೇಟು ಹಾಕಿದ್ದಾನೆ.
ಕೋಟಿ-ಕೋಟಿ ಸಂಗ್ರಹ ಎಂದು ಆರೋಪಿಸಿದ್ದ ಸಾಗರ್ ಜೊತೆ ನವೀನ್ ವಾಗ್ವಾದ ಮಾಡಿದ ಆಡಿಯೋ ಕೂಡ ಈಗ ವೈರಲ್ ಆಗಿದೆ. ನವೀನ್-ಸಕಲೇಶಪುರದ ಸಾಗರ್ ನಡುವೆ ನಡೆದ ಹಣ ವಸೂಲಿ ಬಗ್ಗೆ ಸಂಭಾಷಣೆ ಹಾಸನದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಅರ್ಜುನನ ಹೆಸರಿನಲ್ಲಿ ಹಣ ಸಂಗ್ರಹಕ್ಕೆ ಜನರ ಆಕ್ರೋಶ – ಸಾರ್ವಜನಿಕರಿಂದ ಹಣ ಪಡೆರಯುವುದಕ್ಕೆ ಈತನಿಗೆ ಅನುಮತಿ ಕೊಟ್ಟವರು ಯಾರು? ಈತನ ವೈಯಕ್ತಿಕ ಖಾತೆಗೆ ಯಾರೂ ಹಣ ಹಾಕಬೇಡಿ. ಅಲ್ಲದೆ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ : ಚಿನ್ನು ನನ್ನ ಮಗ, ಅವನು ಈಗ ನಮ್ಮ ಜೊತೆ ಇಲ್ಲ : ಆ್ಯಂಕರ್ ಅನುಶ್ರೀ..!