​“ರಾಯರ ದರ್ಶನ” : ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಸಂಗಮ – ಮಂತ್ರಾಲಯ ರಾಯರ ಕುರಿತಾದ ಆಲ್ಬಂ ಚಿತ್ರೀಕರಣ ಯಶಸ್ವಿ!

ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದು ಖ್ಯಾತರಾದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಕೋಟ್ಯಂತರ ಭಕ್ತರಿಗೆ ಇದೊಂದು ಅದ್ಭುತವಾದ ಸಿಹಿ ಸುದ್ದಿ. ರಾಯರ ದಿವ್ಯ ಚರಿತ್ರೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ದೃಶ್ಯೀಕರಿಸುವ “ರಾಯರ ದರ್ಶನ” ಆಲ್ಬಂ ಸಾಂಗ್ ಸದ್ದಿಲ್ಲದೆ ಸಿದ್ಧವಾಗುತ್ತಿದ್ದು, ಶ್ರೀ ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಹೆಮ್ಮೆಯಿಂದ ಅರ್ಪಿಸುತ್ತಿರುವ ಈ ವಿಶೇಷ ಪ್ರಾಜೆಕ್ಟ್‌ಗೆ ಚಿತ್ರರಂಗದ ದೈತ್ಯ ಪ್ರತಿಭೆಗಳು ಕೈಜೋಡಿಸಿರುವುದು ವಿಶೇಷ.

​ಈ ಆಲ್ಬಂ ಕೇವಲ ಒಂದು ಭಕ್ತಿಗೀತೆಯಾಗಿ ಉಳಿಯದೆ, ದಕ್ಷಿಣ ಭಾರತದ ಖ್ಯಾತ ನಟರ ಸಮಾಗಮಕ್ಕೆ ಸಾಕ್ಷಿಯಾಗುತ್ತಿದೆ. ಇದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ನೆನಪಿರಲಿ ಪ್ರೇಮ್ ಸೇರಿದಂತೆ ಚಿತ್ರರಂಗದ 25ಕ್ಕೂ ಹೆಚ್ಚು ಜನಪ್ರಿಯ ತಾರೆಯರು ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಈ ಆಲ್ಬಂ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಜಾಗತಿಕ ಮಟ್ಟದ ಭಕ್ತರನ್ನು ತಲುಪುವ ಗುರಿ ಹೊಂದಿದೆ.

​ಮಂತ್ರಾಲಯದ ಗುರು ಸಾರ್ವಭೌಮರ ಕುರಿತು ಈವರೆಗೆ ಯಾರು ಹೇಳದ ಮತ್ತು ತೋರಿಸದ ರಾಯರ ಬದುಕಿನ ಕೆಲವು ಅಪರೂಪದ ವಿಷಯಗಳನ್ನು ಈ ಆಲ್ಬಂನಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದದೊಂದಿಗೆ ಈ ಪ್ರಾಜೆಕ್ಟ್ ಅತ್ಯಂತ ಅದ್ಧೂರಿಯಾಗಿ ಮೂಡಿಬರುತ್ತಿದೆ.

​ಈ ಬಹುನಿರೀಕ್ಷಿತ ಆಲ್ಬಂನ ಮೊದಲ ಹಂತದ ಚಿತ್ರೀಕರಣವು ಫೆಬ್ರವರಿ 2 ರಿಂದ ಫೆಬ್ರವರಿ 7ರವರೆಗೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿ ಮೂಡಿಬರುತ್ತಿರುವ ಈ ಆಲ್ಬಂನ ಎರಡನೇ ಹಂತದ ಚಿತ್ರೀಕರಣವು ಫೆಬ್ರವರಿ 24ರಂದು ಪ್ರಾರಂಭವಾಗಲಿದೆ ಎಂದು ತಂಡ ಮಾಹಿತಿ ನೀಡಿದೆ.

ದೃಶ್ಯ ವೈಭವವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರಲು ಚಿತ್ರರಂಗದ ಹೆಸರಾಂತ ತಾಂತ್ರಿಕ ವರ್ಗ ಶ್ರಮಿಸುತ್ತಿದೆ. ​ನಿರ್ಮಾಣ ಸುಗುಣ ರಘು ಭಟ್, ನಿರ್ದೇಶನ ರಘು ಭಟ್, ಸಂಗೀತ ಎಬಿಬಿಎಸ್ ಸ್ಟುಡಿಯೋ, ಸಿ.ಆರ್. ಬಾಬಿ ಹಾಗೂ ಅಜನೀಶ್ ಲೋಕನಾಥ್, ಸಾಹಿತ್ಯ  ನಾಗಾರ್ಜುನ ಶರ್ಮ, ಪ್ರಾಜೆಕ್ಟ್ ಹೆಡ್  ಶ್ರೀನಿಧಿ ಎಂ.ಕೆ. ಹಾಗೂ ಖುಷಿ, ಡೈರೆಕ್ಟರ್ ಆಫ್ ಫೋಟೋಗ್ರಫಿ  ​ನಾಗೇಶ್ ವಿ ಆಚಾರ್ಯ, ತಾಂತ್ರಿಕ ವರ್ಗ  ದೊರೆಅರಸ್,  ಜಿಮ್ಮಿ ಹರೀಶ್ ಮತ್ತು ತಂಡ, ಪ್ರೊಡಕ್ಷನ್ ಹೆಡ್  ದರ್ಶನ್ ಯದುರಾಜ್, ಪ್ರೊಡಕ್ಷನ್ ಟೀಮ್ ಯಶಸ್, ಸಿನಿಮಾಟೋಗ್ರಫಿ  ಪವನ್ ಎಂ. ಬಿ,  ಆಚಾರ್ಯ, ಡ್ರೋನ್ ವಿಘ್ನೇಶ್ ಮೊಗವೀರ್, ಸ್ಥಿರಛಾಯಗ್ರಹಣ ಸಂಪತ್ ಪಾರ್ಸಿ ಡಿ.ಕೆ, ಯೂನಿಟ್ ಬಿ. ಆರ್ ಮಲ್ಲಿಕಾರ್ಜುನ್ ಸಿನಿಲೈಟ್.

 

​ರಾಯರ ಭಕ್ತರ ಮನಸ್ಸಿಗೆ ಹತ್ತಿರವಾಗುವಂತೆ ಮತ್ತು ದೃಶ್ಯ ರೂಪದಲ್ಲಿ ಹೊಸ ಅನುಭವ ನೀಡುವ ಸಲುವಾಗಿ “ರಾಯರ ದರ್ಶನ” ಹಾಡು ಭಕ್ತರ ಕಣ್ಮುಂದೆ ಬರಲು ಸಜ್ಜಾಗಿದೆ.

ಇದನ್ನೂ ಓದಿ : ಸಿಸಿಎಲ್ ಟ್ರೋಫಿ ಫ್ಯಾನ್ಸ್​ಗೆ ಅರ್ಪಿಸಿದ ಕಿಚ್ಚ – ಸಿಸಿಎಲ್ ಆಡಲು ಅಭಿಮಾನಿಗಳಿಗೂ ಆಹ್ವಾನ!

Btv Kannada
Author: Btv Kannada

Read More