ಬೆಂಗಳೂರು : ಖಾಲಿ ಜಾಗದಲ್ಲಿ ಕಾರ್ ಪಾರ್ಕಿಂಗ್ ಮಾಡಿದ ವಿಚಾರವಾಗಿ ನೆರೆ ಮನೆಯವರು ಟೆಕ್ಕಿ ದಂಪತಿಗಳ ಮೇಲೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ದೊಡ್ಡನೆಕ್ಕುಂದಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಎಎಲ್ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ದೊಡ್ಡನೆಕ್ಕುಂದಿಯ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ಸಹಿಷ್ಣು ಮತ್ತು ರೋಹಿಣಿ ದಂಪತಿ ಮೇಲೆ ಪಕ್ಕದ ಮನೆಯ ಆನಂದಮೂರ್ತಿ ಹಾಗೂ ಕುಟುಂಬ ಸದಸ್ಯರು ಹಲ್ಲೆನಡೆಸಿದ್ದಾರೆ. ಸಹಿಷ್ಣು ಮತ್ತು ರೋಹಿಣಿ ಅವರು ಸಾಫ್ಟ್ವೇರ್ ಎಂಜಿನಿಯರ್ಗಳಾಗಿದ್ದು, ಒಂದು ತಿಂಗಳ ಹಿಂದೆಯಷ್ಟೇ ದೊಡ್ಡನೆಕ್ಕುಂದಿಯ ಅಪಾರ್ಟ್ಮೆಂಟ್ಗೆ ಬಂದು ನೆಲೆಸಿದ್ದರು.
ಸಹಿಷ್ಣು ಅವರು ಅಪಾರ್ಟ್ಮೆಂಟ್ನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದ ಕಾರಣ ಮನೆ ಪಕ್ಕದಲ್ಲೇ ಇರುವ ಖಾಲಿ ಜಾಗದಲ್ಲಿ ಸಾಕಷ್ಟು ಕಾರುಗಳನ್ನು ಪಾರ್ಕ್ ಮಾಡುವುದರಿಂದ ಇವರು ಕೂಡ ತಮ್ಮ ಕಾರ್ ಅನ್ನು ನಿಲ್ಲಿಸಿದ್ದರು. ಇದ್ದರಿಂದ ತಮ್ಮ ಮನೆಗೆ ತೆರಳಲು ಅಡಚರಣೆಯಾಗುತ್ತಿದೆ ಎಂದು ಅಸಮಾಧಾನಗೊಂಡಿದ್ದ ಆನಂದಮೂರ್ತಿ ಕುಟುಂಬಸ್ಥರು ಸಹಿಷ್ಣು ಅವರ ಕಾರಿನ ಮೇಲೆ ಉಗುಳಿ ಮಣ್ಣು ಹಾಕಿದ್ದು ಅಲ್ಲದೇ ಕಾರಿನ ಟಯರನ್ನು ಪಂಕ್ಚರ್ ಮಾಡಿದ್ದಾರೆ.
ಈ ವಿಚಾರವಾಗಿ ಸಹಿಷ್ಣು ಅವರು ಆನಂದಮೂರ್ತಿ ಅವರನ್ನು ಪ್ರಶ್ನೆ ಮಾಡಿದ್ದಾಕ್ಕೆ ಆನಂದ್ಮೂರ್ತಿ ಮತ್ತು ಆತನ ಸಹೋದರ ಪ್ರಶಾಂತ್ ಒಟ್ಟಾಗಿ ಸಹಿಷ್ಣು ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾದ ರೋಹಿಣಿ ಅವರನ್ನು ಆನಂದ್ಮೂರ್ತಿ ಪತ್ನಿಯು ಎಳೆದಾಡಿ ಹಲ್ಲೆನಡೆಸಿದ್ದಾಳೆ. ಘಟನೆ ಸಂಬಂಧ ರೋಹಿಣಿ ದೂರು ನೀಡಿದ್ದರು.
ಇನ್ನು ರೋಹಿಣಿ ಅವರು ನೀಡಿದ ದೂರಿನ ಮೇರೆಗೆ ಹಲ್ಲೆ, ಅಪರಾಧ ಸಂಚು ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಹೆಚ್ಎಎಲ್ ಠಾಣಾ ಪೊಲೀಸರು ಆನಂದ್ಮೂರ್ತಿ, ಆತನ ಪತ್ನಿ ಮತ್ತು ಪ್ರಶಾಂತ್ ಎಂಬಾತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಮೇಘನಾ ಫುಡ್ಸ್ ಗ್ರೂಪ್ ಮೇಲೆ ಐಟಿ ರೇಡ್..!b