ಕೋಲಾರ : ರಾಜ್ಯದಲ್ಲಿ ಲೋಕಸಭೆ ಎಲೆಕ್ಷನ್ ಅಖಾಡ ರಂಗೇರಿದ್ದು, ಇದೀಗ ಕೋಲಾರ ಕ್ಷೇತ್ರದಿಂದ ಮಲ್ಲೇಶ ಬಾಬು ಸ್ಪರ್ಧೆ ಬಹುತೇಕ ಫಿಕ್ಸ್ ಆಗಿದೆ. ಇಂದಿನ ಕೋರ್ ಕಮಿಟಿ ಸಭೆ ಬಳಿಕ ಅಭ್ಯರ್ಥಿಯ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಜೆಡಿಎಸ್ ವರಿಷ್ಠ ದೇವೇಗೌಡ್ರು ಮಲ್ಲೇಶ್ ಬಾಬುಗೆ ಕೋಲಾರ ಕ್ಷೇತ್ರದ ಟಿಕೆಟ್ ಕೊಡಲು ಒಪ್ಪಿಗೆ ನೀಡಿದ್ದಾರೆ.
ಹೆಚ್.ಡಿ.ದೇವೇಗೌಡ್ರು ಇವತ್ತಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡುವಂತೆ ಸೂಚನೆ ನೀಡಿದ್ದು, ಸಭೆ ಬಳಿಕ ಕುಮಾರಸ್ವಾಮಿಯವರು ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಹಿಂದೆ ಮಲ್ಲೇಶ್ ಬಾಬು ಎರಡು ಬಾರಿ ಬಂಗಾರಪೇಟೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ರು. ಆದರೆ ಎರಡೂ ಬಾರಿಯೂ ಮಲ್ಲೇಶ್ ಬಾಬು ಸೋಲನ್ನು ಅನುಭವಿಸಿದ್ದರು.
ಇದೀಗ ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಅಂತಿಮ ಮಾಡುವ ಕುರಿತು ಹೆಚ್ಡಿ ಕುಮಾರಸ್ವಾಮಿ ಇಂದು ಕೋಲಾರ ಮುಖಂಡರ ಸಭೆ ಕರೆದಿದ್ದಾರೆ. ಸಭೆ ಬಳಿಕ ಅಭ್ಯರ್ಥಿ ಹೆಸರು ಅಂತಿಮವಾಗಲಿದೆ. ಎಲ್ಲರ ಒಮ್ಮತದೊಂದಿಗೆ ಜೆಡಿಎಸ್ನಿಂದ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಸದ್ಯ ಕೋಲಾರ ಲೋಕಸಭಾ ಕ್ಷೇತ್ರ ಮೈತ್ರಿ ಪಕ್ಷಗಳಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಈ ಮಧ್ಯೆ ಕೇವಲ ಎರಡು ಕ್ಷೇತ್ರಕ್ಕಾಗಿ ಮೈತ್ರಿ ಬೇಕಿತ್ತಾ ಎಂದು ಕೆಲವು ಜೆಡಿಎಸ್ ಶಾಸಕರು ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಸದ್ಯ ಚುನಾವಣೆ ಹೊಸ್ತಿಲಲ್ಲಿ ದಳಪತಿಗಳು ಗೊಂದಲದಲ್ಲಿ ಸಿಲುಕಿದಂತಾಗಿದೆ.
ಇದನ್ನೂ ಓದಿ : ಬೆಂಗಳೂರಿನ ಗಾಯತ್ರಿ ಅಸೋಸಿಯೇಟ್ ಗೋದಾಮಿನಲ್ಲಿ ಭಾರೀ ಅಗ್ನಿ ದುರಂತ : ಕೋಟ್ಯಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ..!