ಮೈಸೂರು : ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ದೇಶದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸ್ವಲ್ಪ ಹೊತ್ತಿನ ಮೊದಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಆರ್. ಶೇಷ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಮೈಸೂರು ತಾಲೂಕಿನ ವರುಣಾ ಹೋಬಳಿಯ ಮಾದರಗಳ್ಳಿ ಗ್ರಾಮದ ಸರ್ವೆ ನಂಬರ್ 73/1ರಲ್ಲಿನ 4.19 ಎಕರೆ ಜಮೀನನ್ನು ಕೃಷಿಯಿಂದ ವಸತಿ ಬಳಕೆಗೆ ಪರಿವರ್ತಿಸಲು 2022ರಲ್ಲಿ ಮುಡಾ ಆಯುಕ್ತರು ಕರ್ನಾಟಕ ನಗರ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಿದಾಗ, ಮೈಸೂರು ವಿಮಾನ ನಿಲ್ದಾಣದ ಎತ್ತರ ನಿರ್ಬಂಧದ ಮಿತಿಯು ನಮೂದಿಸಿದ ಭೂಮಿಯ ಮೇಲೆ ಹಾದುಹೋಗಿರುವುದು ಕಂಡುಬಂದಿದೆ.
ಹಾಗಾಗಿ ಸರ್ಕಾರಕ್ಕೆ ವರದಿ ಮಾಡುವ ಮೊದಲು ಭೂ ಪರಿವರ್ತನೆಗೆ ಸಂಬಂಧಿಸಿದಂತೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಭಿಪ್ರಾಯವನ್ನು ಪಡೆಯುವಂತೆ ಸರ್ಕಾರವು ಮುಡಾ ಆಯುಕ್ತರಿಗೆ ಸೂಚನೆ ನೀಡಿತ್ತು. ಆದರೆ ಆರ್. ಶೇಷ ಅವರು ಯಾರ ಗಮನಕ್ಕೂ ತಾರದೆ ನೇರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಆರ್. ಶೇಷ ಅವರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಭೂ ಪರಿವರ್ತನೆ ಮಾಡಿದ್ದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನ ಕಾರ್ಯದರ್ಶಿ ಲತಾ ಅವರು ಆರ್. ಶೇಷ ಅವರನ್ನು ಅಮಾನತು ಮಾಡಿದ್ದಾರೆ.
ಮುಡಾ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಾರ್ಚ್ 15ರ ಬೆಳಿಗ್ಗೆಯಷ್ಟೇ ನಿವೃತ್ತಿಯಾಗಿದ್ದು, ಈ ಹೆಚ್ಚುವರಿ ಜವಬ್ದಾರಿಯನ್ನೂ ಆರ್. ಶೇಷ ಅವರು ಹೊತ್ತಿದ್ದರು. ಇದೀಗ ಮುಡಾದ ಟಿಪಿಎಂ ಮತ್ತು ಸೂಪರಿಡೆಂಟ್ ಇಂಜಿನಿಯರ್ ಎರಡೂ ಪ್ರಮುಖ ಹುದ್ದೆಗಳು ಖಾಲಿಯಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ : ಇಬ್ಬರು ಸ್ಥಳದಲ್ಲೇ ಸಾ*ವು..!