ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿ ಕಾರಿನಲ್ಲಿ ಮೃತದೇಹ ಇರಿಸಿ ಆರೋಪಿಗಳು ಪರಾರಿಯಾಗಿರುವ ಘಟನೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಉದ್ಯಮಿ ಕೃಷ್ಣ ಯಾದವ್ 20 ವರ್ಷಗಳಿಂದ ಮಾರುತಿನಗರದಲ್ಲಿ ನೆಲೆಸಿದ್ದರು. ಬಾಗಲೂರು ವೃತ್ತ ಬಳಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಮಗ ನೀಡಿರುವ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೆಲಸವಿರುವುದಾಗಿ ಹೇಳಿ ಸೋಮವಾರ ಮನೆಯಿಂದ ಹೊರಗೆ ಬಂದಿದ್ದ ಕೃಷ್ಣ, ರಾತ್ರಿ ವಾಪಸು ಹೋಗಿರಲಿಲ್ಲ. ಬೆಳಿಗ್ಗೆ ಬರಬಹುದೆಂದು ಮನೆಯವರು ಸುಮ್ಮನಾಗಿದ್ದರು. ಆದರೆ, ಬೆಳಿಗ್ಗೆ ಕೃಷ್ಣ ಮೃತದೇಹ ಸಿಕ್ಕಿದೆ. ಕೃಷ್ಣ ಅವರು ತಮ್ಮ ಕಾರಿನಲ್ಲಿ ಇಬ್ಬರು ವ್ಯಕ್ತಿಗಳ ಜೊತೆ ಹೊರಟಿದ್ದರೆಂದು ಮಾಹಿತಿಯಿದ್ದು, ಅದೇ ವ್ಯಕ್ತಿಗಳು ಕೃಷ್ಣ ಅವರನ್ನು ಹರಿತವಾದ ಆಯುಧದಿಂದ 15ಕ್ಕೂ ಹೆಚ್ಚು ಬಾರಿ ಇರಿದು ಕೊಂದಿದ್ದಾರೆ. ನಂತರ ಮೃತದೇಹ ಸಮೇತ ಕಾರನ್ನು ಬಾಗಲೂರು ವೃತ್ತದ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದ ಕೃಷ್ಣ, ಹಲವು ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದರು. ಕೆಲವರ ಜೊತೆ ವೈಷಮ್ಯ ಹೊಂದಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಯಲಹಂಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ‘ಕಾಂತಾರ’ ಪ್ರೀಕ್ವೇಲ್ನಲ್ಲಿ ರಿಷಬ್ ಶೆಟ್ಟಿ ಜೊತೆ ಜ್ಯೂ.NTR? –