ಬೆಂಗಳೂರು : ಬೆಂಗಳೂರಿನ ಕುಂದಲಹಳ್ಳಿ ಗೇಟ್ ಸಮೀಪ ಇರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತುವಿನಿಂದಲೇ ಸ್ಫೋಟವಾಗಿರೋದು ಮೇಲ್ನೋಟಕ್ಕೆ ಖಚಿತವಾಗಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ IED ಬಳಕೆ ಶಂಕೆ ವ್ಯಕ್ತವಾಗುತ್ತಿದ್ದು, ಸ್ಫೋಟಕ ಸುಧಾರಿತ ಸಾಧನ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಘಟನೆ ಬಗ್ಗೆ ಖುದ್ದು ಅಮಿತ್ ಶಾ ಅವರು ಮಾಹಿತಿ ಪಡೆದಿದ್ದಾರೆ.
IED ಬಳಸಿರುವ ಅನುಮಾನದ ಆಯಾಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ನಿಗೂಢ ವಿದ್ವಂಸಕ ಕೃತ್ಯ ಎಸಗಲು IED ಬಳಸಿದ್ದರು ಎಂದು ಹೇಳಲಾಗುತ್ತಿದೆ. ಕೇಂದ್ರ ಇಂಟೆಲಿಜೆನ್ಸ್ನಿಂದ ಕಮಿಷನರ್ಗೆ ಮಾಹಿತಿ ರವಾನೆಯಾಗಿದ್ದು, ಈಗಾಗ್ಲೇ ಸ್ಥಳಕ್ಕೆ ಕಮಿಷನರ್ ದಯಾನಂದ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಫೆಯ ಸ್ಫೋಟದ ಸ್ಥಳದಲ್ಲಿ FSL, ಬಾಂಬ್ ಸ್ಕ್ವಾಡ್ ಪರಿಶೀಲನೆ ಚುರುಕುಗೊಳಿಸಿದೆ.
ಈ ಸಂಬಂಧ ಸ್ಥಳಕ್ಕೆ ಭಯೋತ್ಪಾದನಾ ನಿಗ್ರಹ ದಳ (ATS) ಕೂಡ ಎಂಟ್ರಿಕೊಟ್ಟಿದೆ. ಕೈ ತೊಳೆಯುವ ಬೆಜಿನ್ ಕೆಳಗೆ ಡಸ್ಟ್ಬಿನ್ನಲ್ಲಿ ಇಟ್ಟಿದ್ದ ಸ್ಫೋಟಕದಿಂದ ಈ ಬ್ಲಾಸ್ಟ್ ಸಂಭವಿಸಿದೆ. ಸ್ಥಳದಲ್ಲಿ 12 ಡಿಸಿ ಬ್ಯಾಟರಿ, ಬೋಲ್ಟ್ಗಳು ಪತ್ತೆಯಾಗಿದೆ. ಮಧ್ಯಾಹ್ನ 1:05ರ ವೇಳೆಗೆ ಈ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಒಟ್ಟು ಐವರು ಗಾಯಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.
ಘಟನೆಯ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ, ಬಾಂಬ್ ಬ್ಲಾಸ್ಟ್ ಅನುಮಾನ ವ್ಯಕ್ತಪಡಿಸಿದ್ದಾರೆ. ನಾನು ರಾಮೇಶ್ವರಂ ಕೆಫೆ ಮಾಲೀಕರ ಜೊತೆ ಮಾತನಾಡಿದ್ದೇನೆ. ಕೆಫೆಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿಲ್ಲ ಎಂದಿದ್ದಾರೆ. ಯಾರೋ ತಂದಿಟ್ಟ ಬ್ಯಾಗ್ನಲ್ಲಿದ್ದ ವಸ್ತು ಸ್ಫೋಟಿಸಿದೆ. ಮಾಲೀಕರು ನನಗೆ ಈ ಮಾಹಿತಿಯನ್ನು ಕೊಟ್ಟಿದ್ದಾರೆ. ಹೀಗಾಗಿ ಇದು ನಿಸ್ಸಂಶಯವಾಗಿ ಬಾಂಬ್ ಬ್ಲಾಸ್ಟ್ ಇರಬಹುದು ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಆಗಿದ್ದು ಹೇಗೆ ಗೊತ್ತಾ? ಅನಾಮಿಕನೊಬ್ಬ ಕಾಫಿ ಕುಡಿಯೋ ನೆಪದಲ್ಲಿ ಕೆಫೆಗೆ ಬಂದಿದ್ದ. ಕಾಫಿ ಕುಡಿದು, ಕೈತೊಳೆದು ಬ್ಯಾಗ್ ಡಸ್ಟ್ಬಿನ್ಲ್ಲಿಟ್ಟ ಸೆಕೆಂಡ್ನಲ್ಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ವ್ಯಕ್ತಿ ಹೋದ ಕೆಲವೇ ಕ್ಷಣಗಳಲ್ಲಿ ಬ್ಯಾಗ್ನಲ್ಲಿ ಹೊಗೆ ಬರಲು ಶುರುವಾಗಿದ್ದು,
ನೋಡ್ ನೋಡುತ್ತಿದ್ದಂತೆ ಭಾರೀ ಸದ್ದಿನೊಂದಿಗೆ ಬ್ಯಾಗ್ ಸ್ಟೋಟಗೊಂಡಿದೆ. ಬಳಿಕ ಚೆಲ್ಲಾಪಿಲ್ಲಿಯಾಗಿ ಬ್ಯಾಟರಿ ಮತ್ತು ವೈರ್ಗಳು ಚದುರಿ ಬಿದ್ದಿವೆ ಎಂದು
ಸ್ಥಳದಲ್ಲಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟ : ಐವರಿಗೆ ಗಂಭೀರ ಗಾಯ..!