ಚಿಕ್ಕೋಡಿ : ಅಥಣಿ MLA ಲಕ್ಷ್ಮಣ ಸವದಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಎನ್ನುವ ಚರ್ಚೆಯ ನಡುವೆಯೇ ಅವರ ಹುಟ್ಟುಹಬ್ಬದ ಬ್ಯಾನರ್ಗಳಲ್ಲಿ ಕಾಂಗ್ರೆಸ್ ಚಿಹ್ನೆ ಮಾಯವಾಗಿದ್ದು, ಕಟೌಟ್, ಬ್ಯಾನರ್ಗಳೆಲ್ಲವೂ ಕೇಸರಿ ಬಣ್ಣದಿಂದ ರಾರಾಜಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಇತ್ತೀಚೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದಾದ ಬಳಿಕ ಸವದಿಯವರೂ ಸಹ ಬಿಜೆಪಿಗೆ ಮರಳುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿತ್ತು. ಇದೀಗ ಸವದಿಯವರ ಹುಟ್ಟುಹಬ್ಬದ ಬ್ಯಾನರ್ ಹೊಸ ಚರ್ಚೆಗೆ ಕಾರಣವಾಗಿದೆ. ಸವದಿಯವರು ಕೇಸರಿ ಪೇಟ ತೊಟ್ಟಿರುವ ಫೋಟೋ ಹಾಕಿ ಶುಭಾಶಯ ಬೋರ್ಡ್ ನ್ನು ಬೆಂಬಲಿಗರು ಸಂಪೂರ್ಣ ಕೇಸರಿಮಯ ಮಾಡಿದ್ದಾರೆ.
ಪೆ.16 ರಂದು ಲಕ್ಷ್ಮಣ್ ಸವದಿ ಹುಟ್ಟುಹಬ್ಬದ ಹಿನ್ನೆಲೆ ಅಥಣಿಯಲ್ಲಿ ಸವದಿ ಆಪ್ತರು, ಮುಖಂಡರು ಹಾಗೂ ಸ್ಥಳೀಯ ಸಂಸ್ಥೆಯ ಸದಸ್ಯರಿಂದ ಪಟ್ಟಣದಲ್ಲಿ ಶುಭಾಶಯ ಕೋರಿ ನೂರಾರು ಫ್ಲೆಕ್ಸ್ಗಳನ್ನು ಹಾಕಿದ್ದಾರೆ. ಈ ಬ್ಯಾನರ್ಗಳಲ್ಲಿ ಒಂದರಲ್ಲೂ ಕಾಂಗ್ರೆಸ್ ಚಿಹ್ನೆ ಇಲ್ಲದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೆಳಗಾವಿಯಲ್ಲಿ ನಿನ್ನೆ ನಡೆದಿದ್ದ ಗ್ಯಾರಂಟಿ ಸಮಾವೇಶಕ್ಕೂ ಸವದಿ ಅವರು ಹೋಗಿಲ್ಲ. ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಲೀಡರ್ಸ್ ಸಮಾವೇಶದಲ್ಲಿದ್ರೂ ಸವದಿ ಗೈರಾಗಿದ್ದರು. ಈ ಎಲ್ಲಾ ಬೆಳವಣಿಗೆ ಹಾಗೂ ಅಥಣಿ MLA ಲಕ್ಷ್ಮಣ ಸವದಿಯವರ ಮುಂದಿನ ನಡೆ ಯಾವ ಕಡೆ ಎಂಬುವುದೂ ಬಾರಿ ಕುತೂಹಲ ಕೆರಳಿಸುತ್ತಿದೆ. ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಸವದಿ ಹೇಳಿದ್ದರೂ ತೆರೆಮರೆಯಲ್ಲಿ ಬಿಜೆಪಿ ನಾಯಕರು ಸವದಿಯನ್ನು ಮರಳಿ ಬಿಜೆಪಿಗೆ ಕರೆ ತರುವ ಕೆಲಸ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಕಲಬುರಗಿ : 20 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ..!