ಸ್ಯಾಂಡಲ್ವುಡ್ನಲ್ಲಿ ‘ಸಿಂಪಲ್ ಕ್ವೀನ್’ ಎಂದೇ ಫೇಮಸ್ ಆಗಿರುವ ನಟಿ ಶ್ವೇತಾ ಶ್ರೀವಾತ್ಸವ್, ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, ‘ಕಿರಗೂರಿನ ಗಯ್ಯಾಳಿಗಳು’, ‘ಹೋಪ್’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದರು. 2006 ರಲ್ಲಿ “ಮುಖಾ ಮುಖಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಶ್ವೇತಾ ಶ್ರೀವಾಸ್ತವ್ ಅವರು, ಈಗ ಲೇಖಕಿಯಾಗಿದ್ದಾರೆ.
ಹೌದು, ಶ್ವೇತಾ ಶ್ರೀವಾತ್ಸವ್ ಅವರು ಎರಡು ದಶಕಗಳ ತಮ್ಮ ಸಿನಿಮಾ ಜರ್ನಿಯ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕಕ್ಕೆ “ರೆಕ್ಕೆ ಇದ್ದರೆ ಸಾಕೆ” ಎಂದು ಹೆಸರಿಟ್ಟಿದ್ದಾರೆ. ಇಂಗ್ಲಿಷ್ ನಲ್ಲೂ(against the grain) ಈ ಪುಸ್ತಕ ಲಭ್ಯವಿದ್ದು, ಅದರ ಹೆಸರು. ಇತ್ತೀಚೆಗೆ ನಯನ ಸಭಾಂಗಣದಲ್ಲಿ ಶ್ವೇತಾ ಶ್ರೀವಾಸ್ತವ್ ಈ ಪುಸ್ತಕ ಅನಾವರಣಗೊಳಿಸಿ ಮಾಹಿತಿ ಹಂಚಿಕೊಂಡರು.
“ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಸಮುದಾಯದ ಪ್ರಗತಿಯನ್ನು ಅಳೆಯಬೇಕು” ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತಿನ ಮೂಲಕ ತಮ್ಮ ಮಾತು ಪ್ರಾರಂಭಿಸಿದ ನಟಿ ಶ್ವೇತಾ ಶ್ರೀವಾಸ್ತವ್, ಅಂಬೇಡ್ಕರ್ ಅವರು ಹೇಳಿದ ಮಾತು ಎಲ್ಲಾ ರಂಗಕ್ಕೂ ಅನ್ವಯಿಸುತ್ತದೆ. ಇನ್ನು, ಹೆಣ್ಣುಮಕ್ಕಳು ಮದುವೆ ಆದ ನಂತರ ಚಿತ್ರದಲ್ಲಿ ನಾಯಕಿಯಾಗಿ ನಟಿಸಬಾರದು ಎಂಬುದು ಎರಡು ದಶಕಗಳ ಹಿಂದೆ ನಾನು ನಟಿಸಲು ಆರಂಭಿಸಿದಾಗಲೂ ಇತ್ತು. ಈಗಲೂ ಇದೆ. ಅದಕ್ಕೆ ಕಾರಣ ಏನು? ಹೆಣ್ಣು ಸ್ವಾವಲಂಬಿ ಅಲ್ಲವೇ? ಆಕೆ ಯಾವುದೇ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎಂದರೆ, ಆಕೆ ಗಂಡ ಅಥವಾ ತಂದೆಯ ಹೆಸರಿನ ಜೊತೆಗೆ ಗುರುತಿಸಿಕೊಳ್ಳುತ್ತಾಳೆ. ಈ ಪರಿಸ್ಥಿತಿ ಎಲ್ಲಾ ಕಾಲದಲ್ಲೂ ಪ್ರಸ್ತುತ. ಹಾಗಂತ ನಮ್ಮ ಸಾಧನೆಗೆ ಮನೆಯವರ ಸಹಕಾರ ಬೇಡ ಅಂತ ನಾನು ಹೇಳುತ್ತಿಲ್ಲ. ವಾಸ್ತವದ ಬಗ್ಗೆ ಮಾತನಾಡುತ್ತೇನೆ ಅಷ್ಟೆ. ಸರಿಸುಮಾರು ಇಪ್ಪತ್ತು ವರ್ಷಗಳ ನನ್ನ ಸಿನಿಬದುಕನ್ನು ಸಾಧನೆ ಅಂತ ನಾನು ಕರೆದುಕೊಳ್ಳುತ್ತೇನೆ ಎಂದಿದ್ದಾರೆ.
ಈ ಸಮಯದಲ್ಲಿ ನಾನು ಎದರಿಸಿದ ಸವಾಲುಗಳು, ಸನ್ನಿವೇಶಗಳು ಹಾಗೂ ಸಂತೋಷದ ವಿಚಾರಗಳು ಎಲ್ಲವನ್ನು ಈ ಪುಸ್ತಕದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇದನ್ನು ಬಯೋಪಿಕ್ ಅಂತಲೂ ಕರೆಯಬಹುದು. ನಾನು ಈ ಪುಸ್ತಕವನ್ನು ಮೊದಲು ಇಂಗ್ಲಿಷ್ನಲ್ಲಿ ಬರೆದಿದ್ದೆ. ಆನಂತರ ತಾಯಿಭಾಷೆಯ ಬಗ್ಗೆ ನನಗೆ ಅಪಾರ ಪ್ರೀತಿ ಹಾಗೂ ಸೆಂಟಿಮೆಂಟ್. ಹೀಗಾಗಿ ಕನ್ನಡದಲ್ಲೂ ಬರೆಯೋಣ ಅನಿಸಿತು. ಪ್ರಕಾಶಕರ ಬಳಿ ಹೇಳಿದೆ ಅವರು ಒಪ್ಪಿಕೊಂಡರು ಎಂದು ತಿಳಿಸಿದರು.
ಇನ್ನು ಲೇಖಕಿಯಾಗಿ ಇದು ಮೊದಲ ಹೆಜ್ಜೆ. ನನ್ನ ಮನೆಯವರು, ಸ್ನೇಹಿತರು ಎಲ್ಲಾ ನಿನ್ನ ಪುಸ್ತಕ ನೀನೆ ಬಿಡುಗಡೆ ಮಾಡುತ್ತೀಯಾ? ಅತಿಥಿಗಳನ್ನು ಕರೆಯುವುದಿಲ್ಲವಾ ಎಂದರು. ಇಲ್ಲ. ಎಲ್ಲರೂ ಮಾಡುವ ರೀತಿ ಮಾಡುವುದು ಬೇಡ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಮುಂದೊಂದು ದಿನ ಅದ್ದೂರಿ ಸಮಾರಂಭವನ್ನು ಆಯೋಜಿಸುತ್ತೇನೆ. ಇಂದು ಭಾರತ ಸೇರಿದಂತೆ ಹದಿನೈದು ದೇಶಗಳಲ್ಲಿ ನನ್ನ ಪುಸ್ತಕ(ಆನ್ ಲೈನ್) ಬಿಡುಗಡೆಯಾಗಿದೆ. ಅಷ್ಟು ದೇಶಗಳಲ್ಲೂ ಪುಸ್ತಕ ದೊರೆಯಲಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನ ಪತಿ ಅಮಿತ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ : ಚನ್ನಪಟ್ಟಣದಿಂದ ನಾನು ಸ್ಪರ್ಧೆ ಮಾಡೋದು ಕನ್ಫರ್ಮ್, ಗುರುವಾರವೇ ನಾಮಪತ್ರ ಸಲ್ಲಿಸುತ್ತೇನೆ – ಸಿ.ಪಿ ಯೋಗೇಶ್ವರ್..!