ಬೆಂಗಳೂರು : ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆದ ಬೆನ್ನಲ್ಲೇ, ರಾಜಕೀಯ ಅಖಾಡ ರಂಗೇರಿದೆ. ಈಗಾಗಲೇ ಶಿಗ್ಗಾಂವಿ ಮತ್ತು ಸಂಡೂರಿಗೆ ಅಭ್ಯರ್ಥಿಗಳನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಶಿಗ್ಗಾಂವಿ ಮತ್ತು ಸಂಡೂರು ಬಂಗಾರು ಹನುಮಂತುಗೆ ಟಿಕೆಟ್ ನೀಡಲಾಗಿದೆ. ಆದರೆ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಕದನ ಮತ್ತಷ್ಟು ಕುತೂಹಲ ಕೆರಳಿಸಿದೆ.
ಚನ್ನಪಟ್ಟಣ ಜೆಡಿಎಸ್ನ ಭದ್ರ ಕೋಟೆಯಾಗಿದ್ದು, ಅಲ್ಲಿ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಹುಟ್ಟುಹಾಕಿದ್ದು, ಇದು ದಳಪತಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಾಗಾಗಿ ಹೆಚ್ಡಿಕೆ ಇದೀಗ ದೇವೇಗೌಡರ ಭೇಟಿಗೆ ಮುಂದಾಗಿದ್ದಾರೆ. ಚನ್ನಪಟ್ಟಣ ಕಗ್ಗಂಟು ಬಿಡಿಸಲು ದೊಡ್ಡಗೌಡರ ಜೊತೆ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ. ದೇವೇಗೌಡರ ಮಾರ್ಗದರ್ಶನ ಪಡೆದು, ಬಳಿಕ ಜೆಡಿಎಸ್ ಮುಖಂಡರ ಜೊತೆ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ.
ಇಂದು ಸಂಜೆ ನಂತರ ಬಿಡದಿ ತೋಟದಲ್ಲಿ ಮೆಗಾ ಮೀಟಿಂಗ್ ಆಯೋಜಿಲಾಗಿದ್ದು, ಈ ಮೀಟಿಂಗ್ನಲ್ಲೇ ಚನ್ನಪಟ್ಟಣ ಅಭ್ಯರ್ಥಿ ಫೈನಲ್ ಮಾಡುವ ಸಾಧ್ಯತೆಯಿದೆ. ಈಗಿರುವ ಮಾಹಿತಿ ಪ್ರಕಾರ ಜೆಡಿಎಸ್ನಿಂದಲೇ ಅಭ್ಯರ್ಥಿ ನಿಲ್ಲಿಸೋದು ಫಿಕ್ಸ್ ಎನ್ನಲಾಗಿದೆ. ಆದರೆ ಯಾರನ್ನು ಅಭ್ಯರ್ಥಿ ಮಾಡಬೇಕು ಎನ್ನುವ ಗೊಂದಲ ಸೃಷ್ಟಿಯಾಗಿದೆ.
ನಿಖಿಲ್, ಅನಿತಾ, ಜಯಮುತ್ತು ಮೂವರಲ್ಲಿ ಯಾರನ್ನು ನಿಲ್ಲಿಸಬೇಕು? ಸಿಪಿ ಯೋಗೇಶ್ವರ್ ಬಿಜೆಪಿಯಿಂದ ಬಂಡಾಯವೆದ್ದರೆ ಏನ್ ಮಾಡ್ಬೇಕು? ಯೋಗೇಶ್ವರ್ಗೇ ಜೆಡಿಎಸ್ ಚಿಹ್ನೆ ಅಡಿ ಟಿಕೆಟ್ ಕೊಟ್ಟರೆ ಹೇಗೆ? ಇದೆಲ್ಲಾ ವಿಚಾರಗಳ ಬಗ್ಗೆ ಹೆಚ್ಡಿಕೆ ಇಂದು ಸಮಾಲೋಚನೆ ನಡೆಸಲಿದ್ದಾರೆ. ಚನ್ನಪಟ್ಟಣದ ಕೊನೆ ಕ್ಷಣಕ್ಷಣದ ನಾಡಿ ಮಿಡಿತ ತಿಳಿಯುವ ಹೆಚ್ಡಿಕೆ, ಬಹುತೇಕ ಇಂದು ಸಂಜೆಯೇ ಚನ್ನಪಟ್ಟಣ ಅಭ್ಯರ್ಥಿಯನ್ನು ಫೈನಲ್ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : ನಟ ಸುದೀಪ್ ತಾಯಿ ಸರೋಜಾ ವಿಧಿವಶ..!