ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿರುವ ಹಾಗೂ ನಾಯಕಿಯಾಗೂ ನಟಿಸಿರುವ ಬಹುನಿರೀಕ್ಷಿತ “ಭೈರಾದೇವಿ” ಚಿತ್ರ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ನಾಡಹಬ್ಬ ನವರಾತ್ರಿಯ ಮೊದಲ ದಿನವೇ ಈ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.
ಬಿಡುಗಡೆ ದಿನಾಂಕ ಘೋಷಣೆಯಾಗಿರುವುದರಿಂದ ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚಿಗೆ ತಮ್ಮ ನಿವಾಸದ ಬಳಿ “ಭೈರಾದೇವಿ” ಚಿತ್ರದ ಪ್ರಚಾರದ ಮೊದಲ ಹೆಜ್ಜೆಯಾಗಿ ಟ್ಯಾಬ್ಲೊ ಹಾಗೂ ಆಟೋ ಪ್ರಚಾರಕ್ಕೆ ಅದ್ದೂರಿ ಚಾಲನೆ ನೀಡಿದರು. ಈ ವೇಳೆ ರಾಧಿಕಾ ಕುಮಾರಸ್ವಾಮಿ ಅವರು ಸ್ವತಃ ತಾವೇ ಆಟೋ ಚಾಲನೆ ಮಾಡಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ನೂರಾರು ಪುರುಷ ಹಾಗೂ ಮಹಿಳಾ ಆಟೋ ಚಾಲಕರು ಕೂಡ ಉಪಸ್ಥಿತರಿದ್ದರು. “ಭೈರಾದೇವಿ” ಚಿತ್ರದ ಪೋಸ್ಟರ್ ವುಳ್ಳ ಟ್ಯಾಬ್ಲೊ ಹಾಗೂ ಆಟೋಗಳು ರಾಜ್ಯಾದ್ಯಂತ ಸಂಚರಿಸಲಿದೆ.
ಶ್ರೀಜೈ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿರಾಜ್ ಹಾಗೂ ಯಾದವ್ ಅವರ ಸಹ ನಿರ್ಮಾಣವಿದೆ. ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನವಿರುವ “ಭೈರಾದೇವಿ” ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ರವಿಶಂಕರ್, ರಂಗಾಯಣ ರಘು ಮುಂತಾದವರಿದ್ದಾರೆ. ಬಿಗ್ ಬಜೆಟ್ನ ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಕಾಣಲಿದೆ.
ಈ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಅವರು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದು, ಹೆಚ್ಚಿನ ಕುತೂಹಲ ಸೃಷ್ಟಿಸಿದೆ. ಅಘೋರಿ ಸಬ್ಜೆಕ್ಟ್ ಹೊಂದಿರುವ ಚಿತ್ರದಲ್ಲಿ ಪೊಲೀಸ್ ಪಾತ್ರಕ್ಕೆ ಅದೇನು ಕೆಲಸ ಇರಬಹುದು ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಇನ್ನು ಈ ಎಲ್ಲಾ ಕ್ಯೂರಿಯಾಸಿಟಿಗೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದ್ದು, ಅಲ್ಲಿಯವರೆಗೆ ಕಾಯಬೇಕಷ್ಟೇ. ಒಟ್ಟಿನಲ್ಲಿ, ಹಲವು ವರ್ಷಗಳ ಬಳಿಕ ನಟಿ ರಾಧಿಕಾ ಕುಮಾರಸ್ವಾಮಿಯವರು ಅಭಿಮಾನಿಗಳಿಗೆ ‘ಭೈರಾದೇವಿ’ ಮೂಲಕ ದರ್ಶನ ನೀಡಲಿದ್ದಾರೆ
ಇದನ್ನೂ ಓದಿ : ದರ್ಶನ್-ಸುದೀಪ್ ಬೇರೆಯಾಗೋಕೆ ಅವರೇ ಕಾರಣನಾ?