ಕೋಲಾರ : ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಹುದ್ದೆ ಸೇಲ್ ಕೇಸ್ ಈಗ ಹಲವು ದೊಡ್ಡವರ ಬುಡಕ್ಕೆ ಬರೋ ಲಕ್ಷಣಗಳು ಕಾಣತೊಡಗಿವೆ. ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ ವೈ ನಂಜೇಗೌಡರ ಮೇಲೆ ದಾಳಿ ನಡೆಸಿರೋ ಜಾರಿ ನಿರ್ದೇಶನಾಲಯ (ED), ‘ದೊಡ್ಡವರ’ ಮೇಲೂ ರೇಡ್ಗೆ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.
ಕೆ.ವೈ.ನಂಜೇಗೌಡರ ಮೇಲಿನ ಇಡಿ ದಾಳಿ ವೇಳೆ ಹಲವು ದಾಖಲೆಗಳು ED ಅಧಿಕಾರಿಗಳಿಗೆ ಸಿಕ್ಕಿವೆ. ಜೊತೆಗೆ ಶಿಫಾರಸ್ಸು ಪತ್ರಗಳು, ಫಲಾನುಭವಿಗಳು ಕೊಟ್ಟಿರುವ ಹೇಳಿಕೆಗಳನ್ನೂ ಅಧಿಕಾರಿಗಳು ಕ್ರೋಢೀಕರಿಸುತ್ತಿದ್ದಾರೆ. ಶಾಸಕ ನಂಜೇಗೌಡ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ನೇಮಕಾತಿಗೆ ಸಂಬಂಧಿಸಿದ ಹಲವು ಮಾಹಿತಿಗಳು ಅಧಿಕಾರಿಗಳಿಗೆ ಲಭ್ಯವಾಗಿವೆ.
ಕೋಚಿಮುಲ್ನಲ್ಲಿ ಖಾಲಿಯಿದ್ದ 273 ಹುದ್ದೆಗಳ ನೇರ ನೇಮಕಾತಿಗೆ 2023ರ ಸೆಪ್ಟೆಂಬರ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದಾದ ಕೆಲವೇ ದಿನಕ್ಕೆ ಸಂದರ್ಶನ ಮುಗಿಸಿ ನೇಮಕಾತಿ ಪತ್ರ ಕೊಟ್ಟು ಅಭ್ಯರ್ಥಿಗಳನ್ನು ತರಬೇತಿಗೆ ಕಳುಹಿಸಲಾಗಿದೆ. ಇದರ ಬೆನ್ನಲೇ ಹಣಕ್ಕಾಗಿ ಹುದ್ದೆಯನ್ನು ಸೇಲ್ ಮಾಡಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು. ಯಾವ ಅಭ್ಯರ್ಥಿಗೆ ಯಾರು ಶಿಫಾರಸ್ಸು ಮಾಡಿದ್ದಾರೆ ಎನ್ನುವ ದಾಖಲೆ ಪತ್ರವೊಂದು ಭಾರೀ ವೈರಲ್ ಆದ ಮೇಲೆ ಕೇಸ್ ದಾಖಲಾಗಿತ್ತು. ಈ ದಾಖಲೆಗಳಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಪ್ರಭಾವಿ ದೊಡ್ಡವರ ಹೆಸರುಗಳನ್ನು ಉಲ್ಲೇಖಿಸಲಾಗಿತ್ತು.
ಅದಾದ ಬಳಿಕ ಇಡಿ ದಾಳಿ ನಡೆಸಿತ್ತು. ಕರ್ನಾಟಕದಲ್ಲಿ ಹಗರಣವೊಂದಕ್ಕೆ ಸಂಬಂಧಿಸಿ ಇಡಿ ನಡೆಸಿದ ಮೊದಲ ದಾಳಿ ಇದು ಎಂಬ ಕುಖ್ಯಾತಿಗೂ ಪೋಸ್ಟಿಂಗ್ ಹಗರಣ ಪಾತ್ರವಾಗಿದೆ. ಈ ಸಂಬಂಧ, 10 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದ, ಇಡಿ ಅಧಿಕಾರಿಗಳು, ಇಂದು ಅವರಲ್ಲಿ ಹಲವರ ವಿಚಾರಣೆ ನಡೆಸಿದ್ದಾರೆ.
ಈಗಾಗಲೇ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗೋಪಾಲಮೂರ್ತಿ, ಆಡಳಿತಾಧಿಕಾರಿ ನಾಗೇಶ್, ಹಣಕಾಸು ವಿಭಾಗ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಲಭ್ಯ ಮಾಹಿತಿಗಳ ಪ್ರಕಾರ, ಈ ದಾಖಲೆಗಳನ್ನು ಆಧರಿಸಿ, ಹಣ ಕೊಟ್ಟಿರೋ ಅಭ್ಯರ್ಥಿಗಳು ಮತ್ತು ಪಡೆದಿರೋ ದೊಡ್ಡವರಿಗೆ ಸಂಕಷ್ಟ ಎದುರುಗಾವುದು ನಿಶ್ಚಿತವಾಗಿದೆ.
ಒಂದು ವೇಳೆ, ಅಕ್ರಮ ಸಾಬೀತಾದಲ್ಲಿ ಹಣವೂ ಇಲ್ಲ ಮತ್ತು ಕೆಲಸವು ಇಲ್ಲದೆ ಜೈಲು ಸೇರಬೇಕಾಗುತ್ತದೆ ಎಂಬ ಭಯ ಅಭ್ಯರ್ಥಿಗಳಿಗೆ ಶುರುವಾಗಿದೆ. ಈ ಮಧ್ಯೆ, ಇಡಿ ತನಿಖೆ ಬಿಸಿ ಮುಟ್ಟುತ್ತಿದ್ದಂತೆಯೇ, ನೇಮಕಾತಿ ಪ್ರಕ್ರಿಯೆ ರದ್ದುಗೊಳ್ಳುವುದು ಖಚಿತವಾಗಿದ್ದು, ಹಣ ವಾಪಸ್ ನೀಡುವಂತೆ ಅಭ್ಯರ್ಥಿಗಳ ಪೋಷಕರು ಆ ದೊಡ್ಡವರ ಬೆನ್ನುಬಿದ್ದಿದ್ದಾರೆ ಎನ್ನುವ ಮಾಹಿತಿಗಳೂ ಹೊರ ಬೀಳತೊಡಗಿವೆ.
ಪ್ರತಿಯೊಂದು ಹುದ್ದೆಯನ್ನು ತಲಾ 20 ರಿಂದ 30 ಲಕ್ಷಕ್ಕೆ ಸೇಲ್ ಮಾಡಿರುವುದು ತನಿಖೆ ವೇಳೆ ಬಯಲಿಗೆ ಬಂದಿದೆ. ಒಟ್ಟು 81 ಹುದ್ದೆಗಳನ್ನು ಬಿಕರಿ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೆ, ಪ್ರಕರಣ ಮುಚ್ಚಿ ಹಾಕಲು ಪೊಲೀಸರ ಮೇಲೆ ಭಾರೀ ಒತ್ತಡವನ್ನೂ ಹೇರಳಾಗುತ್ತಿದೆ. ಹೀಗಾಗಿ, ಇಡಿ ಅಧಿಕಾರಿಗಳೇ ಪ್ರಕರಣದ ಬುಡ ಕೆಣಕಲು ಮುಂದಾಗಿದ್ದಾರೆ. ಪ್ರಕರಣದ ತನಿಖೆ ಆಳಕ್ಕೆ ಹೋಗುತ್ತಿದ್ದಂತೆಯೇ, ಆ ದೊಡ್ಡವರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಸೋ ಸಾಧ್ಯತೆಗಳಿವೆ. ಹಣದ ಪ್ರಭಾವ ಇರೋ ಅಭ್ಯರ್ಥಿಗಳ ಜೊತೆಗೆ ಅಧಿಕಾರದ ಪ್ರಭಾವ ಇರೋ ಆ ದೊಡ್ಡವರೂ ಜೈಲು ಸೇರುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
– ಬಿಟಿವಿ ನ್ಯೂಸ್ ಕೋಲಾರ
ಇದನ್ನೂ ಓದಿ : ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಕಾಪಾಡಿ – ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ..!