ವಿಶ್ವವೇ ಅಯೋಧ್ಯೆಯತ್ತ ನೋಡುವಂತೆ ಜನವರಿ 22ರಂದು ಶ್ರೀರಾಮನ ಪ್ರತಿಷ್ಠಾಪನೆ ನಡೆಯಲಿದೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ದೇಗುಲ ನಿರ್ಮಾಣದ ಕನಸು ನನಸಾಗಿದೆ.
ದೇಗುಲ ಲೋಕಾರ್ಪಣೆಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಎಲ್ಲೆಲ್ಲೂ ರಾಮ ನಾಮ ಸ್ಮರಣೆ, ಜಪ-ತಪ ಸಾಗಿದೆ. ಇದೇ ವೇಳೆ, ರಾಮನನ್ನು ಪೂಜಿಸುವ ಕನ್ನಡ ಹಾಡೊಂದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮನಸೋತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಹಾಡೊಂದನ್ನು ಆಲಿಸಿರುವ ನರೇಂದ್ರ ಮೋದಿಯವರು ಆ ಹಾಡಿಗೆ ತಲೆದೂಗಿದ್ದಾರೆ.
ಈ ಹಾಡನ್ನು ಸಾಮಾಜಿಕಜಾಲತಾಣ ‘X’ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ.
‘ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದವರು ಪ್ರತಿಪಾದಿಸಿದ್ದಾರೆ.
ಶಿವಶ್ರೀ ಸ್ಕಂದ ಪ್ರಸಾದ್ ಅವರು ಈಹಾಡನ್ನು ಅತ್ಯಂತ ಭಕ್ತಿಪೂರ್ವಕವಾಗಿ ಹಾಡಿದ್ದಾರೆ. ಅವರ ಹಾಡಿನಲ್ಲಿ ರಾಮ ಭಕ್ತಿಯು ಸಹಜವಾಗಿ ಸೃಜಿಸುತ್ತದೆ. ಹೀಗಾಗಿ ಅದನ್ನು ಮೆಚ್ಚಿ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ತಾವು ಹಾಡಿರುವ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿಯವರು ಪೋಸ್ಟ್ ಮಾಡಿರುವುದಕ್ಕೆ ಗಾಯಕಿ ಶಿವಶ್ರೀ ಅವರೂ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನಗೆ ತುಂಬಾ ಸಂತೋಷದ ಕ್ಷಣ. ನಾನು ಈಗ ಅನುಭವಿಸುತ್ತಿರುವ ಭಾವನೆಯನ್ನು ವಿವರಿಸಲು ನನಗೆ ಪದಗಳಿಲ್ಲ. ಇದು ಒಂದು ರೋಮಾಂಚಕ ಕ್ಷಣ. ಇದು ಭಗವಾನ್ ರಾಮನಿಂದ ಬಂದ ಆಶೀರ್ವಾದ ಎಂದು ಅವರು ಹೇಳಿದ್ದಾರೆ.
‘ಪೂಜಿಸಲೆಂದೆ ಹೂಗಳ ತಂದೆ’ ಹಾಡು ಮೂಲತಃ ರಾಜ್ಕುಮಾರ್ ನಟನೆಯ ‘ಎರಡು ಕನಸು’ ಸಿನಿಮಾದ ಹಾಡು. ದೊರೈ-ಭಗವಾನ್ ಜೋಡಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಇದು ಕನ್ನಡದ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿದೆ.
ಈ ಗೀತೆಯ ಸಾಲುಗಳು ಇಲ್ಲಿದೆ ನೋಡಿ..!
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ…
ತೆರೆಯೋ ಬಾಗಿಲನು ರಾಮ
ತೆರೆಯೋ ಬಾಗಿಲನು ರಾಮ
ಮೋಡದ ಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ ಉಷೆತಂದಿಹಳು
ತಾಮಸವೇಕಿನ್ನು ಸ್ವಾಮಿ.
ತೆರೆಯೋ ಬಾಗಿಲನು ರಾಮ
ಒಲಿದರು ಚೆನ್ನ ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸು ನನ್ನಾ, ಸ್ವಾಮಿ
ತೆರೆಯೋ ಬಾಗಿಲನು ರಾಮ
ಇದನ್ನೂ ಓದಿ : ಮೈಸೂರಿನ ಅರುಣ್ ಯೋಗಿರಾಜ್ರನ್ನು ಹಾಡಿ ಹೊಗಳಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಶ್ರೀ ಚಂಪತ್ ರೈ..