ದಾವಣಗೆರೆ : ಪ್ರೊ ಕಬಡ್ಡಿ ಲೀಗ್ ಸೀಸನ್ 11ನೇ ಆವೃತ್ತಿಗೆ ಕರ್ನಾಟಕದ ಬೆಂಗಳೂರು ಬುಲ್ಸ್ ತಂಡಕ್ಕೆ ಇದೇ ಮೊದಲ ಬಾರಿಗೆ ದಾವಣಗೆರೆಯ ಕಬಡ್ಡಿ ಪಟುವೊಬ್ಬರು ಆಯ್ಕೆಯಾಗಿದ್ದಾರೆ. ಹೌದು, ದಾವಣಗೆರೆಯ ಭಾರತ್ ಕಾಲೊನಿ ಸಮೀಪದ ಕಬ್ಬೂರು ಬಸಪ್ಪ ನಗರದ ನಿವಾಸಿ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಪಟು ಚಂದ್ರನಾಯ್ಕ ಈ ಬಾರಿ ಬೆಂಗಳೂರು ಬುಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಚಂದ್ರನಾಯ್ಕ 8 ಬಾರಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ, ವಿಶ್ವವಿದ್ಯಾಲಯ ಹಂತ, ಖೇಲೋ ಇಂಡಿಯಾ ನ್ಯಾಷನಲ್ಸ್ನಲ್ಲೂ ಭಾಗವಹಿಸಿ ಅದ್ಭುತ ಪ್ರದರ್ಶನ ನೀಡಿದ್ದರು. ಚಂದ್ರನಾಯ್ಕ್ ಧಾರವಾಡದಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಸ್ಟೆಲ್ನಲ್ಲಿದ್ದುಕೊಂಡು ಮೂರು ವರ್ಷ ತರಬೇತಿ ಪಡೆದಿದ್ದರು. ಇತ್ತೀಚಿಗೆ ಕನ್ಯಾಕುಮಾರಿಯಲ್ಲಿ ನಡೆದ ಕಬಡ್ಡಿ ಆಯ್ಕೆ ಟ್ರಯಲ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪ್ರೊ ಕಬಡ್ಡಿ ಲೀಗ್ನಲ್ಲಿ ಮೋಸ್ಟ್ ಫ್ಯಾನ್ಸ್ ಫಾಲೋ ಹೊಂದಿರೋ ಟೀಂ ಬೆಂಗಳೂರು ಬುಲ್ಸ್. ಈ ತಂಡಕ್ಕೆ ಸೇರಿದ್ದು ಚಂದ್ರನಾಯ್ಕಗೂ ಸಖತ್ ಖುಷಿ ಕೊಟ್ಟಿದೆ. ತಂದೆ-ತಾಯಿ ಇಲ್ಲದ ಚಂದ್ರನಾಯ್ಕ ಅಕ್ಕಂದಿರ ಸಹಾಯದಲ್ಲಿ ಬೆಳೆದು ಕರ್ನಾಟಕದ ಕಬಡ್ಡಿ ಸ್ಟಾರ್ ಪಟ್ಟ ಪಡೆದಿದ್ದಾರೆ. 6ನೇ ಕ್ಲಾಸ್ನಿಂದ ಕಬಡ್ಡಿಯಲ್ಲಿ ಫಂಟರ್ ಆಗಿದ್ದ 21 ವರ್ಷದ ಚಂದ್ರನಾಯ್ಕಗೆ ಅಭಿನಂದನೆಗಳ ಮಹಾಪೂರ ಹರಿದು ಬರ್ತಿದೆ.
ಪ್ರೊ ಕಬಡ್ಡಿಯಲ್ಲಿ ಆಡಬೇಕೆಂಬುದು ನನ್ನ ಕನಸಾಗಿತ್ತು. ಸದ್ಯ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿದ್ದು ತುಂಬಾ ಸಂತಸವಾಗುತ್ತಿದೆ. ಇನ್ನು ತನ್ನ ಇಷ್ಟೆಲ್ಲಾ ಸಾಧನೆಗೆ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಮುತ್ತು ದವಲೇಶ್ವರ ಕಾರಣ ಎಂದು ಚಂದ್ರಾನಾಯ್ಕ ಹೇಳಿದ್ದಾರೆ.
ಇದನ್ನೂ ಓದಿ : ಪ್ರಾಸಿಕ್ಯೂಷನ್ ಸಂಕಷ್ಟ ಹೊತ್ತಲ್ಲೇ ರಾಯರ ಸನ್ನಿಧಿಗೆ ಸಿಎಂ..!