ಬೆಂಗಳೂರು : ರಾಜ್ಯದಲ್ಲಿ ದೋಸ್ತಿ ಪಾದಯಾತ್ರೆಯ ಪರ್ವ ಅಂತಿಮ ಹಂತಕ್ಕೆ ತಲುಪಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಹಾಗೂ ಪ್ರಕರಣದ ತನಿಖೆಯನ್ನು CBIಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಇಂದು ಬೃಹತ್ ಸಮಾವೇಶದೊಂದಿಗೆ ಮುಕ್ತಾಯವಾಗಲಿದೆ.
ಇನ್ನು ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡುವಂತೆ ಪಟ್ಟು ಹಿಡಿದು ಹೋರಾಟವನ್ನು ತೀವ್ರಗೊಳಿಸಿರುವ ಬಿಜೆಪಿ-ಜೆಡಿಎಸ್ಗೆ ಅಪಾರ ಜನ ಬೆಂಬಲ ವ್ಯಕ್ತವಾಗಿದ್ದು, ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪಾದಯಾತ್ರೆಯ ಅದ್ಧೂರಿ ಸಮಾರೋಪ ಸಮಾರಂಭ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಮೈಸೂರಿನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಹೈವೋಲ್ಟೇಜ್ ಸಮಾವೇಶ ಪ್ರರಂಭವಾಗಲಿದೆ. 7 ಕಿಲೋ ಮೀಟರ್ ಪಾದಯಾತ್ರೆ ಮೂಲಕ ದೋಸ್ತಿ ನಾಯಕರು ವೇದಿಕೆಗೆ ಎಂಟ್ರಿ ಕೊಡಲಿದ್ದಾರೆ. ಸಿದ್ದು-ಡಿಕೆಶಿ ಮೇಲೆ ಜಂಟಿ ವಾಗ್ದಾಳಿ ನಡೆಸಲು BSY-HDK ಸಜ್ಜಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಅವರು ದಾಖಲೆ ಸಮೇತ ಉತ್ತರ ನೀಡಲು ರೆಡಿಯಾಗಿದ್ದಾರೆ. ಒಟ್ಟಾರೆ, ನಿನ್ನೆ ಹಸ್ತಪಡೆ ನೀಡಿದ ಪ್ರತಿ ಹೇಳಿಕೆಗಳಿಗೂ ಮೈತ್ರಿ ಪಡೆ ಇಂದು ತಕ್ಕ ಪ್ರತ್ಯುತ್ತರ ನೀಡಲಿದೆ.
ಮಹಾರಾಜ ಕಾಲೇಜು ಮೈದಾನದ ಸುತ್ತ ಮುತ್ತ ಭದ್ರತೆಗೆ 175 ಎಸ್ಐ, 100 ಜನ ಕಮಾಂಡೋಗಳು, 500 ಹೋಂ ಗಾರ್ಡ್ಸ್ಗಳು ಹಾಗೂ ಕೆಎಸ್ಆರ್ಪಿ ಜೊತೆಗೆ ಸಿಎಆರ್ ತುಕಡಿ ಸೇರಿ 4,500 ಮಂದಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಆ.3ರಂದು ಮುಡಾ ಹಗರಣ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಿಂದ ಜಂಟಿ ಪಾದಯಾತ್ರೆಯನ್ನು ಮಿತ್ರಪಕ್ಷಗಳಾದ ಬಿಜೆಪಿ-ಜೆಡಿಎಸ್ ಆರಂಭಿಸಿದ್ದವು. ಸುಮಾರು 128 ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದ ಮೈತ್ರಿ ನಾಯಕರು, ಪಾದಯಾತ್ರೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹಗರಣಗಳ ಆರೋಪದ ಲಕಗಳನ್ನು ಪ್ರದರ್ಶಿಸಿ ಸಾಗಿದ್ದರು. ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಉಭಯ ಪಕ್ಷಗಳ ನಾಯಕರು ಪ್ರತಿದಿನ ನಡೆದ ಬಹಿರಂಗ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ : ಚುನಾವಣೆ ಡೆಪಾಸಿಟ್ ಇಡಲೂ ನನ್ನ ಬಳಿ ಹಣ ಇರ್ಲಿಲ್ಲ – ಮುಡಾ ಆರೋಪದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸಿಎಂ..!