ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ವಿರೂಪಗೊಳಿಸಿ ಅವಹೇಳನಕಾರಿ ಪೋಸ್ಟ್ ಹಾಗೂ ಅವರ ಪತ್ನಿಯ ವಿರುದ್ಧ ಫೇಸ್ಬುಕ್ ಮತ್ತು ಇನ್ಟಾಗ್ರಾಂನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ FIR ದಾಖಲಾಗಿದೆ.
ಕೆಪಿಸಿಸಿಯ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿ ಸಂಜಯ್ ಯಾದವ್ ಎಂಬುವವರು ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದೂರಿನಲ್ಲಿ, ದಿನಾಂಕ 11.01.2024 ರಂದು ಇನ್ಟ್ಟಾಗ್ರಾಮ್ ಸಾಮಾಜಿಕ ಜಾಲತಾಣದ ‘ಟ್ರೋಲ್ ಕನ್ನಡಿಗ(Troll Kannadiga)’ ಎಂಬ ಖಾತೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಟೋಪಿ ಹಾಗೂ ಗಡ್ಡ ಹಾಕಿ ಭಾವಚಿತ್ರವನ್ನು ವಿರೂಪಗೊಳಿಸಿ ಪೋಸ್ಟ್ ಮಾಡಲಾಗಿದೆ.
ಅದೇ ರೀತಿ ಇದೇ ಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆಗಳನ್ನು ಜೋಡಿಸಿ ರಾಮಭಕ್ತರನ್ನು ಕಾಡುತ್ತಿರುವ ಸಿದ್ದರಾವಣ ಎಂದು ಡಿಸೈನ್ ಮಾಡಿ, ಅವಾಚ್ಯವಾಗಿ ನಿಂದಿಸಿ, ಪೋಸ್ಟ್ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಅದರ ಲಿಂಕ್ ಅನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೇ, ಫೇಸ್ಬುಕ್ನಲ್ಲಿ ‘ಕೃತಿಕಾ ಕೃತಿ’ ಎಂಬ ಹೆಸರಿನ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಪತ್ನಿಯನ್ನು ಉಲ್ಲೇಖಿಸಿ, ಅಶ್ಲೀಲವಾಗಿ ನಿಂದಿಸಿ ಅವಹೇಳನ ಮಾಡಿದ್ದು, ಅವರ ಗೌರವಕ್ಕೆ ಧಕ್ಕೆ ತರಲಾಗಿದೆ.
ಹೀಗಾಗಿ, ಈ ಮೂರು ಪೋಸ್ಟ್ಗಳನ್ನು ಹಾಕಿದವರನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೈಗ್ರೌಂಡ್ಸ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂಜಯ್ ಯಾದವ್ ಆಗ್ರಹಿಸಿದ್ದಾರೆ. ದೂರು ಆಧರಿಸಿ ಪೊಲೀಸರು ಅಪರಿಚಿತರ ವಿರುದ್ಧ FIR ದಾಖಲಿಸಿದ್ದು, ಆರೋಪಿಗಳ ವಿರುದ್ಧ IPC ಸೆಕ್ಷನ್ 153,153A,505(2) ಅಡಿ FIR ದಾಖಲಿಸಿದ್ದಾರೆ.
ಇದನ್ನೂ ಓದಿ : ಅಯ್ಯೋಧೆಯಲ್ಲಿ ರಾಮ ಮಂದಿರದ ಬಳಿಕ ಹೊಸ ಹಿಂದೂ ಯುಗ ಆರಂಭ : ಯತ್ನಾಳ್..!