ಆನೇಕಲ್ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಪಟ್ಟಣದಲ್ಲಿ ಪುರಸಭೆ ಸದಸ್ಯರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹೊಸೂರು ಮುಖ್ಯ ರಸ್ತೆಯಲ್ಲಿ ಆನೇಕಲ್ ಪುರಸಭೆಯ 22ನೇ ವಾರ್ಡ್ ಸದಸ್ಯ ರವಿ ಎಂಬುವರನ್ನು ಬುಧವಾರ (ಜುಲೈ 24) ರಾತ್ರಿ ಮಾರಕಾಸ್ತ್ರಗಳಿಂದ ಹಂತಕರು ಕೊಚ್ಚಿ ಹತ್ಯೆ ಮಾಡಿದ್ದಾರೆ.
ಹಂತಕರು ಕೊಲೆ ಮಾಡಲು ಮೊದಲೇ ಪ್ಲ್ಯಾನ್ ಮಾಡಿದ್ದು, ರವಿ ಮನೆಯಿಂದ ಆಚೆ ಬರೋದನ್ನೇ ಕಾದುಕುಳಿತಿದ್ದರು. ರವಿ ಮನೆಯಿಂದ ಆಚೆ ಬಂದ ಕೂಡಲೇ ಮಾರಕಾಸ್ತ್ರಗಳಿಂದ ಹಂತಕರು ದಾಳಿ ಮಾಡಿ ಧರ-ಧರನೆ ಎಳೆತಂದು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಕಳೆದ 15 ದಿನಗಳಿಂದ ನಿರಂತರವಾಗಿ ಕೆಲ ಪುಡಿ ರೌಡಿಗಳ ಗ್ಯಾಂಗ್ ಲಾಂಗ್ ಮಚ್ಚು ಹಿಡಿದು ರವಿ ಮನೆ ಸುತ್ತ ಮುತ್ತ ಓಡಾಡುತ್ತಿದ್ದರು. ಅದೇ ಯುವಕರು ರವಿಯ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹಂತಕರು ರವಿಯನ್ನು ಮನಯೆಯ ಮುಂಭಾಗದಿಂದ ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರವಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಲೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇನ್ನು ಮರ್ಡರ್ ಕೇಸ್ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್.ಪಿ.ಸಿ.ಕೆ ಬಾಬ ಮಾಹಿತಿ ನೀಡಿದ್ದು, ಕಳೆದ ರಾತ್ರಿ 8.30 ಸುಮಾರಿಗೆ ವ್ಯಕ್ತಿ ಒಬ್ಬ ಬಂದಿದ್ದಾನೆ. ಹೊರ ಬಂದ ನಂತರ ಮೂವರು ಅಟ್ಯಾಕ್ ಮಾಡಿದ್ದಾರೆ. ಕೂಡಲೆ ರವಿಯನ್ನು ಆಸ್ಪತ್ರೆಗೆ ತರಲಾಗಿತ್ತು. ಆರೋಪಿಗಳು ಯಾರು ಎಂದು ಗೊತ್ತಾಗಿದೆ. ಎರಡು ತಂಡಗಳನ್ನು ರಚನೆ ಮಾಡಿದ್ದೇವೆ. ಸ್ವಲ್ಪ ದಿನದ ಹಿಂದೆ ಕಾರಿನ ಗ್ಲಾಸ್ ಹಾಗೂ ಮನೆಗೆ ಕಲ್ಲು ಹೊಡೆದಿದ್ರು. ಆ ಗ್ಯಾಂಗ್ ರವಿ ಜೊತೆಗೆ ಇದ್ರು. ಹೀಗಾಗಿ ರವಿಯನ್ನು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇಂತಹ ಸಮಾಜಘಾತುಕರ ವಿರುದ್ದ ಕ್ರಮ ವಹಿಸುತ್ತೇವೆ ಎಂದು ಸಿಕೆಬಾಬಾ ಹೇಳಿದ್ರು.