ಬೆಂಗಳೂರು : KAS ಅಧಿಕಾರಿಗಳ ಸಂಘದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಬಡ್ತಿ ಸಿಗದೆ ಕಂಗಾಲಾಗಿರುವ ತಹಶೀಲ್ದಾರ್ಗಳು, ಇದೀಗ ತಮ್ಮದೇ ಸಂಘದ ವಿರುದ್ಧ ತಿರುಗಿಬಿದ್ದಿದ್ದಾರೆ. ಸಂಘದ ಪದಾಧಿಕಾರಿಗಳು ಕೇವಲ ತಮ್ಮ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಹೊರತು, ಸದಸ್ಯರ ಹಿತರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಬಹಿರಂಗ ಪತ್ರ ಬರೆದಿದ್ದಾರೆ.

ರಾಜ್ಯದ 2014ರ ಬ್ಯಾಚ್ನ 200ಕ್ಕೂ ಹೆಚ್ಚು ತಹಶೀಲ್ದಾರ್ಗಳಿಗೆ ಸಹಾಯಕ ಆಯುಕ್ತರಾಗಿ (AC) ಬಡ್ತಿ ನೀಡಿಲ್ಲ. ಈ ಬಗ್ಗೆ ಧ್ವನಿ ಎತ್ತಬೇಕಾದ ಕೆಎಎಸ್ ಅಧಿಕಾರಿಗಳ ಸಂಘ ಮೌನಕ್ಕೆ ಶರಣಾಗಿರುವುದು ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಘದ ಮೌನದಿಂದಾಗಿ ಅಧಿಕಾರಿಗಳ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣಪತಿ ಶಾಸ್ತ್ರಿ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಅಧಿಕಾರಿಗಳು ಸಂಘದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸಂಘದ ಅಧ್ಯಕ್ಷರಿಗೆ ಬರೆದ ಸ್ಫೋಟಕ ಪತ್ರದಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಏಪ್ರಿಲ್ 23ರಂದು ನಡೆಯಲಿದೆ. ಈ ವೇಳೆ ಸಂಘಕ್ಕೆ ‘ಕಪ್ಪು ಪಟ್ಟಿ’ಯ ಆತಂಕ ಎದುರಾಗಿದ್ದು, ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಉದ್ಘಾಟನಾ ಸಮಾರಂಭದ ವೇಳೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಂಘದಲ್ಲಿ ಕೆಲ ಅಧಿಕಾರಿಗಳು ಬಡ್ತಿ ಪಡೆದು ಆಯಕಟ್ಟಿನ ಜಾಗದಲ್ಲಿ ಹುದ್ದೆ ಪಡೆದಿದ್ದಾರೆ. ಆದ್ರೆ ತಹಶೀಲ್ದಾರ್ ಕೇಡರ್ ಅಧಿಕಾರಿಗಳಿಗೆ ದಶಕ ಕಳೆದರೂ ಪ್ರಮೋಷನ್ ಕೊಟ್ಟಿಲ್ಲ. ಅಧಿಕಾರಿಗಳಿಗೆ ಪ್ರಮೋಷನ್ ಸಿಗದಿದ್ರೂ ಕೆಎಎಸ್ ಅಧಿಕಾರಿಗಳ ಸಂಘ ಮೌನವಾಗಿದೆ. ಹಾಗಾಗಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳ ವಿರುದ್ದ ಧರಣಿ ನಡೆಸಲು ಮುಂದಾಗಿದ್ದಾರೆ.

ಸಂಘದ ಪದಾಧಿಕಾರಿಗಳಷ್ಟೇ ಲಾಭ ಪಡೆದಿದ್ದಾರೆ ಎಂದು ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಸಂಘದ ವಿರುದ್ದವೂ ಅಸಮಾಧಾನಗೊಂಡ ಕೆಎಎಸ್ ಅಧಿಕಾರಿ ಸಂಘದ ಸದಸ್ಯರು ಬಹಿರಂಗ ಪತ್ರ ಬರೆದಿದ್ದಾರೆ. ಕರ್ನಾಟಕ ಆಡಳಿತ ಸೇವೆ ಅಧಿಕಾರಿ ಸಂಘ ಅಧ್ಯಕ್ಷರಿಗೆ ಬರೆದ ಪತ್ರ ಸದ್ಯ ಕೆಎಎಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ : http://ಕೆಂಗೇರಿ ಬಳಿ ರಾತೋ ರಾತ್ರಿ ನೂರಾರು ಕೋಟಿ ಜಮೀನು ಕಬಳಿಸಲು ಯತ್ನ – FIR ದಾಖಲು!









