ಬೆಂಗಳೂರು : ಮಡಿವಾಳ ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣದಲ್ಲಿ ಶಿವರಾಜ್ ಮೃತದೇಹ ಪತ್ತೆ ಮಾಡಿದ್ದೇ ರೋಚಕವಾಗಿದೆ. ಶಿವರಾಜ್ ಮೃತದೇಹ ಪತ್ತೆ ಮಾಡೋಕೆ ಬರೋಬ್ಬರಿ 250 ಸಿಸಿಟಿವಿ ಕ್ಯಾಮರಾಗಳನ್ನು ಮಡಿವಾಳ ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಸುಬ್ರಮಣ್ಯಪುರ ಪೊಲೀಸರು ಹಾಗೂ ಮಡಿವಾಳ ಪೊಲೀಸರಿಂದ ಶಿವರಾಜ್ಗಾಗಿ ಶೋಧ ನಡೆದಿತ್ತು. ಸುಬ್ರಹ್ಮಣ್ಯಪುರದಿಂದ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೊ ಸ್ಟೇಷನ್ವರೆಗೂ ಸಿಸಿಟಿವಿ ಪರಿಶೀಲನೆ ಮಾಡಲಾಗಿತ್ತು. ಸತತ 5 ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದ ಮಡಿವಾಳ ಪೊಲೀಸರು ಕೊನೆಗೆ ತನಿಖೆ ನಡೆಸುತ್ತ ಜ್ಞಾನಭಾರತಿ ಮೆಟ್ರೊ ಸ್ಟೇಷನ್ಗೆ ಬಂದು ತಲುಪಿದ್ದರು.
ಈ ವೇಳೆ ತನಿಖೆಯಲ್ಲಿ ಶಿವರಾಜ್ ಜೂ.25ರಂದು ರಾತ್ರಿ 8.24ಕ್ಕೆ ಜ್ಞಾನಭಾರತಿ ಮೆಟ್ರೋ ಸ್ಟೇಷನ್ ಬಂದಿರುವುದು ಗೊತ್ತಾಗುತ್ತದೆ. ಸ್ಟೇಷನ್ ಪಾರ್ಕಿಂಗ್ನಲ್ಲಿ ಬೈಕ್ ನಿಲ್ಲಿಸಿದ್ದ ಶಿವರಾಜ್ ನಂತರ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿವಿ ಒಳಗೆ ನಡೆದು ಬಂದಿದ್ದರು. ಈ ದೃಶ್ಯಗಳೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಹೀಗಾಗಿ ನಿನ್ನೆ ಬೆಳಗ್ಗೆ ಬೆಂಗಳೂರು ವಿವಿ ಆವರಣದೊಳಗೆ ಮಡಿವಾಳ ಪೊಲೀಸರು ಹುಡುಕಾಡಿದ್ದ ಸಂದರ್ಭ ಆವರಣದ ಪಾಳು ಬಿದ್ದ ಬಾವಿಯಲ್ಲಿ ಶಿವರಾಜ್ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ಕೂಡಲೇ ಮಡಿವಾಳ ಪೊಲೀಸರು ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹ ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಶಿವರಾಜ್ ಅವರದು ಕೊಲೆಯಲ್ಲ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ಮೃತದೇಹ ಹೊರತೆಗೆದಾಗ ಮೃತದೇಹಕ್ಕೆ ಕಲ್ಲು ಕಟ್ಟಿರೋದು ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ಒಬ್ಬನೇ ಬಂದಿರುವುದರಿಂದ ಇದು ಕೊಲೆಯಲ್ಲ, ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.
ಇದನ್ನೂ ಓದಿ : ಸಿಎಂ, ಡಿಸಿಎಂ ಸ್ಥಾನದ ಬಗ್ಗೆ ಮಾತಾಡಿದ್ರೆ ನೋಟಿಸ್ ಕೊಟ್ಟು ಕ್ರಮ : ಡಿಕೆ ಶಿವಕುಮಾರ್..!