ಮೈಸೂರು : ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್ ನೀಡಿದ್ದ ಶಿರಸ್ತೆದಾರ್ಗೆ ಕಂದಾಯ ಇಲಾಖೆ ಸಸ್ಪೆಂಡ್ ಶಾಕ್ ನೀಡಿದೆ. ಮೈಸೂರು ಜಿಲ್ಲೆಯ ನಂಜನಗೂಡು ಗೋಳೂರು ಗ್ರಾಮದ ಶಿರಸ್ತೆದಾರ್ ಶ್ರೀನಾಥ್ ಸಸ್ಪೆಂಡ್ ಆದವರು.
ನಕಲಿ ದಾಖಲೆ ನೀಡಿದ್ದ ಕಾರಣಕ್ಕಾಗಿ ಸಸ್ಪೆಂಡ್ ಮಾಡಲಾಗಿದೆ. ಮೂವರು ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಐವರ ಮೇಲೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನಂಜನಗೂಡು ತಾಲ್ಲೂಕಿನ ಮುಳ್ಳೂರು ಗ್ರಾಮದ ಚಂದ್ರಶೇಖರ್ ಎಂಬುವವರು ಮೃತಪಟ್ಟಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿ ಮಾಡಿಕೊಡಲಾಗಿತ್ತು.
ಜಮೀನು ಖಾತೆ ಮಾಡಿಸಿಕೊಳ್ಳಲು ಮರಣ ಪತ್ರವನ್ನು ಅಧಿಕಾರಿಗಳು ನೀಡಿದ್ದರು. ಅಸಲಿಗೆ ಚಂದ್ರಶೇಖರ್ ಕೆನಡಾದಲ್ಲಿ ವಾಸವಾಗಿದ್ದಾರೆ. ಮುಳ್ಳೂರು ಗ್ರಾಮದ ಸರ್ವೆ ನಂಬರ್ 442 ರಲ್ಲಿ 1.26 ಗುಂಟೆ ಮತ್ತು 444ರ ಸರ್ವೆ ನಂಬರ್ ನಲ್ಲಿ 1.30 ಗುಂಟೆ ಜಮೀನು ಚಂದ್ರಶೇಖರ್ ಹೆಸರಿನಲ್ಲಿದೆ.
ಈ ಭೂಮಿಯನ್ನು ಅದೇ ಗ್ರಾಮದ ಕೃಷ್ಣೇಗೌಡ ಮತ್ತು ಶಿವ ಮಲ್ಲೇಗೌಡ ಎಂಬುವವರು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶಾಮಿಲಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ತಮ್ಮದಾಗಿಸಿಕೊಂಡಿದ್ದರು. ನಂಜನಗೂಡು ಕಂದಾಯ ಇಲಾಖೆಯ ಗೋಳೂರು ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ರಾಜಸ್ವ ನಿರೀಕ್ಷಕ ಜೆ.ಪ್ರಕಾಶ್, ಶಿರಸ್ತೆದಾರ್ ಶ್ರೀನಾಥ್ ಎಂಬುವವರು ಖಾತೆ ಬದಲಾವಣೆ ಮಾಡಿದ್ದರು.
ಈ ವಿಚಾರವಾಗಿ ಐವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚಂದ್ರಶೇಖರ್ ಸಂಬಂಧಿ ಎನ್.ನಾಗರಾಜರಾವ್ ಬಿಳಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಕಲಿ ಡೆತ್ ಸರ್ಟಿಫಿಕೇಟ್ಗೆ ಸಹಕರಿಸಿದ್ದ ಶಿರಸ್ತೆದಾರ್ ಶ್ರೀನಾಥ್ ಅಮಾನತು ಮಾಡಿ ಮೈಸೂರಿನ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಉಳಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಬೆಂಗಳೂರು : ರೈಲು ಬೋಗಿಯ ಡೆಸ್ಟ್ ಬಿನ್ನಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ..!