ದೇವನಹಳ್ಳಿ : ಭುವನೇಶ್ವರದಿಂದ ಬೆಂಗಳೂರಿಗೆ ಬಂದ ಪ್ರಶಾಂತಿ ಎಕ್ಸ್ಪ್ರೆಸ್ ರೈಲಿನ ಡೆಸ್ಟ್ ಬಿನ್ನಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ಡಸ್ಟ್ಬಿನ್ನಲ್ಲಿಯೇ ಹಸುಗೂಸು ನರಳಿ ನರಳಿ ಪ್ರಾಣ ಬಿಟ್ಟಿದ್ದು, ಯಲಹಂಕ ರೈಲು ನಿಲ್ದಾಣದಲ್ಲಿ ನಿನ್ನೆ ಮುಂಜಾನೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಂಡು ಮಗುವನ್ನ ಬಿಳಿ ಬಟ್ಟೆಯಲ್ಲಿ ಸುತ್ತಿ ಡಸ್ಟ್ ಬಿನ್ಗೆ ಹಾಕಲಾಗಿತ್ತು. ಯಲಹಂಕಕ್ಕೆ ರೈಲು ಬಂದ ವೇಳೆ ಡಸ್ಟ್ ಬಿನ್ನಲ್ಲಿ ಶಿಶು ಪತ್ತೆಯಾಗಿದೆ. ಮಗು ಜನಿಸಿದ ನಾಲ್ಕೈದು ಗಂಟೆಯಲ್ಲೇ ತಾಯಿ ಮಗುವನ್ನು ಡಸ್ಟ್ ಬಿನ್ಗೆ ಎಸೆದು ಹೋಗಿದ್ದಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಕಸದ ಬುಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹ ಕಂಡ ಪ್ರಯಾಣಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಯಶವಂತಪುರ ರೈಲ್ವೆ ಪೋಲಿಸರು, ಮಗುವಿನ ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದು, ಸದ್ಯ ಮಗುವಿನ ಮೃತದೇಹವನ್ನು ಬೆಂಗಳೂರು ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ : ಕೆಂಪೇಗೌಡ ದಿನಾಚರಣೆಗೆ ದಳಪತಿಗಳಿಗೆ ನೀಡದ ಆಹ್ವಾನ – ಮಿಸ್ಟೇಕ್ ಆಗಿದೆ ಎಂದ ಡಿಸಿಎಂ ಡಿಕೆಶಿ