ಚನ್ನಪಟ್ಟಣ : ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತೊಮ್ಮೆ ಹೈವೋಲ್ಟೇಜ್ ಕದನವಾಗಿ ರಾಜ್ಯದ ಗಮನ ಸೆಳೆಯಲಿದೆ.
ಈ ಚುನಾವಣೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚನ್ನಪಟ್ಟಣ ಗೆಲ್ಲಲು ಡಿಸಿಎಂ ಡಿಕೆ ಶಿವಕುಮಾರ್ ದೊಡ್ಡ ಗೇಮ್ಪ್ಲಾನ್ ನಡೆಸಿದ್ದು, ಪ್ರತಿಷ್ಠಿತ ಚನ್ನಪಟ್ಟಣ ಅಖಾಡಕ್ಕೆ ಪುತ್ರಿ ಐಶ್ವರ್ಯಾ ಅವರನ್ನು ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ನಲ್ಲಿ ಚರ್ಚೆಗಳು ನಡೆಯುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿರುವ ಡಿಕೆ ಶಿವಕುಮಾರ್ ಅವರ ಸೋದರ ಡಿಕೆ ಸುರೇಶ್ ಅವರು ಚನ್ನಪಟ್ಟಣದಲ್ಲಿಉಪಚುನಾವಣೆ ಸ್ಪರ್ಧೆಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಐಶ್ಚರ್ಯಾ ಅವರನ್ನು ಕಣಕ್ಕಿಳಿಸುವ ತೀರ್ಮಾನಕ್ಕೆ ಡಿಕೆಶಿ ಕುಟುಂಬ ಬಂದಿದೆ ಎನ್ನಲಾಗಿದೆ.
ಜೆಡಿಎಸ್ ಕ್ಷೇತ್ರವನ್ನ ಕಾಂಗ್ರೆಸ್ ತಕ್ಕಗೆ ತೆಗೆದುಕೊಳ್ಳಲು ಡಿಸಿಎಂ ಕಸರತ್ತು ನಡೆಸುತ್ತಿದ್ದು, ಜೆಡಿಎಸ್ ಭದ್ರಕೋಟೆಯಾದ ಚನ್ನಪಟ್ಟಣದಲ್ಲಿ ಕೈ ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಡಿಕೆಶಿ ತಯಾರಿ ಮಾಡಿಕೊಂಡಿದ್ದಾರೆ. ಮಾಜಿ ಸಿಎಂ ಎಸ್ಎಂ ಕೃಷ್ಣ ಕುಟುಂಬದ ಸೊಸೆಯೂ ಆಗಿರುವ ಐಶ್ವರ್ಯಾ ಅವರನ್ನು ಈ ಉಪಚುನಾವಣೆ ಮೂಲಕ ರಾಜಕಾರಣಕ್ಕೆ ಪರಿಚಯಿಸಲು ತೀರ್ಮಾನಿಸಲಾಗಿದ್ದು, ಅದಕ್ಕಾಗಿ ಪೂರಕ ವೇದಿಕೆಯನ್ನು ಅಣಿಗೊಳಿಸಲಾಗುತ್ತಿದೆ ಎಂದು ಡಿಸಿಎಂ ಡಿಕೆಶಿ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರದ ಮೂರು ವಾರಗಳಲ್ಲಿ ಡಿಕೆ ಶಿವಕುಮಾರ್ ಅವರು ಮೂರು ಸಲ ಚನ್ನಪಟ್ಟಣಕ್ಕೆ ಭೇಟಿ ನೀಡಿ, ಕ್ಷೇತ್ರದುದ್ದಕ್ಕೂ ಸುತ್ತಾಟದ ಮೂಲಕ ಜನರ ನಾಡಿಮಿಡಿತ ಅರಿಯಲು ಮುಂದಾಗಿರುವುದು ಐಶ್ವರ್ಯಾ ಹೆಗ್ಡೆ ಸ್ಪರ್ಧೆ ಸಾಧ್ಯತೆಯನ್ನು ಖಚಿತಪಡಿಸುತ್ತಿವೆ.
ಇದನ್ನೂ ಓದಿ : ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಆರೋಗ್ಯದಲ್ಲಿ ದಿಢೀರ್ ಏರುಪೇರು : ಆಸ್ಪತ್ರೆಗೆ ದಾಖಲು..!