ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಅಂತ್ಯವಾಗಿದೆ. ಮಂಗಳವಾರ ರಾತ್ರಿ ಪರಿಶೀಲನೆ ನಡೆಸಿ ಇಡಿ ಅಧಿಕಾರಿಗಳು ಮನೆಯಿಂದ ವಾಪಸ್ ಹೊರಟಿದ್ದಾರೆ .
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದ ನಿವಾಸದ ಮೇಲೆ ಇಡಿ ದಾಳಿ ನಡೆದಿತ್ತು. ಸೋಮವಾರ ಬೆಳಗ್ಗೆ 5.30ಕ್ಕೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ 9.45 ಕ್ಕೆ ಎರಡು ಕಾರ್ ನಲ್ಲಿ ವಾಪಸ್ ಹೋಗಿದ್ದಾರೆ. ಶಾಸಕ ನಂಜೇಗೌಡ ನಿವಾಸದಲ್ಲಿ 16.5 ಲಕ್ಷ ಹಣ ಪತ್ತೆಯಾಗಿದೆ.
ಇನ್ನೂ ED ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ನಂಜೇಗೌಡ, 3 ವಿಚಾರವಾಗಿ ನನ್ನ ಬಳಿ ಮಾಹಿತಿ ಕೇಳಿದ್ರು ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಸೋಮವಾರ ಬೆಳಗ್ಗೆ ಇಡಿ ಅಧಿಕಾರಿಗಳು ನಮ್ಮ ಮನೆಗೆ ಬಂದಿದ್ದರು. ಅವರು ಕೇಳಿದ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಒಂದು ಕೋಚಿಮುಲ್ ನೇಮಕಾತಿ, ಎರಡನೆಯದು ದರಕಾಸ್ತು ಸಮಿತಿ ಭೂ ಮಂಜೂರಾತಿ ಮತ್ತು ಮೂರನೆಯದು ನನ್ನ ವ್ಯವಹಾರಗಳ ಬಗ್ಗೆ ಮಾಹಿತಿ ಕೇಳಿದ್ರು. ನನ್ನ ಮುಗಿಸಲು ಸಾಕಷ್ಟು ಜನರ ಸಂಚು ರೂಪಿಸಿದ್ದಾರೆ ಎಂದು ನಂಜೇಗೌಡರು ಆರೋಪಿಸಿದರು.
ಕೆಲವು ದಾಖಲೆ ಹಾಗೂ ತಮ್ಮನ ಮಗಳ ಮದುವೆಗೆ ಬಟ್ಟೆ ತರಲು 16.50 ಲಕ್ಷ ರೂಪಾಯಿ ಹಣ ಹೊಂದಿಸಿದ್ದೆ. ಆ ಹಣ ಹಾಗೂ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ ಹಣ ವಾಪಾಸ್ ನೀಡುವಂತೆ, ಕೇಳಿಕೊಂಡೆವು ಆದರೂ ನೀಡಲಿಲ್ಲ. ಮತ್ತೆ ವಿಚಾರಣೆಗೆ ಕರೆದಿದ್ದಾರೆ ಹೋಗುವೆ ಎಂದು ಶಾಸಕರು ಹೇಳಿದರು. ಮಾಧ್ಯಮಗಳ ಎದುರು ಮಾತನಾಡುವ ವೇಳೆ ಭಾವುಕರಾಗಿ ಶಾಸಕ ಕೆ.ವೈ.ನಂಜೇಗೌಡ ಕಣ್ಣೀರು ಹಾಕಿದ್ದು, ಇದೇ ವೇಳೆ ಪಕ್ಕದಲ್ಲಿದ್ದ ಪತ್ನಿ ರತ್ನಮ್ಮ ಸಹ ಕಣ್ಣೀರು ಹಾಕಿದರು.
ಇದನ್ನೂ ಓದಿ : ಮೂಡಿಗೆರೆ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ ; ಯುವಕನ ಮೇಲೆ ಹಲ್ಲೆ..