ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರು ಶುಕ್ರವಾರ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ನ್ಯಾಯಮೂರ್ತಿಯಾಗಿ ದಶಕಗಳ ಕಾಲ ಅಪ್ರತಿಮ ಸೇವೆ ಸಲ್ಲಿಸಿದ ಅವರು ಮೇ 19 ರಂದು ಅಧಿಕೃತವಾಗಿ ನಿವೃತ್ತರಾಗಲಿದ್ದಾರೆ. ನಿನ್ನೆ ದೆಹಲಿಯಲ್ಲಿ ಎಎಸ್ ಬೋಪಣ್ಣ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಸಲಾಗಿತ್ತು. ‘ನಾವು ಯಾವತ್ತೂ ಹೃದಯವಂತರಾಗಿರಬೇಕು. ದ್ವೇಷದ ಮನೋಭಾವ ಹೊಂದಿರಲೇಬಾರದು’ ಎಂದು ಬೀಳ್ಕೊಡುಗೆ ಸಮಾರಂಭದಲ್ಲಿ ಎಎಸ್ ಬೋಪಣ್ಣ ಹೇಳಿದರು.
ನ್ಯಾಯಮೂರ್ತಿ ಬೋಪಣ್ಣ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ ದಿವಂಗತ ಎ.ಎನ್ ಸೋಮಯ್ಯ ಅವರ ಪುತ್ರರಾಗಿದ್ದಾರೆ. ಕೊಡಗಿನ ಪ್ರತಿಷ್ಠಿತ ಅಜ್ಜಿರಕುಟ್ಟಿ ಮನೆತನದಲ್ಲಿ ಜನಿಸಿದ ಎ ಎಸ್ ಬೋಪಣ್ಣ ಅವರು 1984ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರು ಕರ್ನಾಟಕದ ಕೊಡಗು ಜಿಲ್ಲೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1984 ರ ನವೆಂಬರ್ 21 ರಂದು ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಎ.ಎಸ್ ಬೋಪಣ್ಣ ಅವರು, ಸಿವಿಲ್, ಸಾಂವಿಧಾನಿಕ, ಕಂಪನಿ ಹಾಗೂ ಸೇವೆ ವಿಷಯಗಳಿಗೆ ಸಂಬಂಧಿಸಿದ ವಕಾಲತ್ತು ವಹಿಸಿದ ಅವರಿಗೆ 2006 ರಲ್ಲಿ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು.
2007 ರ ಮಾರ್ಚ್ 1 ರಂದು ಬೋಪಣ್ಣ ಅವರು ಹೈಕೋರ್ಟ್ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2018 ರ ಅಕ್ಟೋಬರ್ 29 ರಂದು ಗೌಹಾಟಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. ಅದೇ ವರ್ಷ ಮೇ 24 ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹಲವು ಮಹತ್ವದ ತೀರ್ಪುಗಳನ್ನು ನೀಡಿರುವ ಎಎಸ್ ಬೋಪಣ್ಣ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದ ನ್ಯಾಯಮೂರ್ತಿಗಳಲ್ಲಿ ಅಗ್ರಪಂಥೀಯರು.
ಇದನ್ನೂ ಓದಿ : ನಟಿ ಪವಿತ್ರಾ ಜಯರಾಮ್ ಸಾವಿನ ಬೆನ್ನಲ್ಲೇ ಆಪ್ತ ಸ್ನೇಹಿತ ಚಂದು ಆತ್ಮಹ*ತ್ಯೆ..!