ಹಾಸನ : ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಹಂಚಿಕೆ ಮಾಡಿದ ಪ್ರಕರಣ ಸಂಬಂಧ ಹಾಸನದ ವಿವಿಧೆಡೆ ನಿನ್ನೆ ವಿಶೇಷ ತನಿಖಾ ತಂಡ (SIT) ದಾಳಿ ನಡೆಸಿದೆ. ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಶರತ್ ಒಡೆತನದ ಬಾರ್ ಮತ್ತು ನಿವಾಸ, ಕಿರಣ್ ಒಡೆತನದ ಹೋಟೆಲ್, ನಿವಾಸ ಸೇರಿ ಹಲವೆಡೆ ಎಸ್ಐಟಿ ದಾಳಿ ನಡೆಸಿದೆ.
ಶರತ್ ಇವರಿಗೆ ಸೇರಿದ ಬಿಎಂ ರಸ್ತೆಯಲ್ಲಿರುವ ಕ್ವಾಲಿಟಿ ಬಾರ್, ಲಾಡ್ಜ್, ಗೌರಿಕೊಪ್ಪಲಿನಲ್ಲಿರುವ ನಿವಾಸಗಳಿಗೂ ತಂಡ ಭೇಟಿ ನೀಡಿ ಶೋಧ ನಡೆಸಿತು. ಪೆನ್ಡ್ರೈವ್ ಹಂಚಿಕೆ ಆರೋಪದಡಿ ಕ್ವಾಲಿಟಿ ಬಾರ್ ಶರತ್ ವಿರುದ್ಧ ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೂ ನಿರೀಕ್ಷಣಾ ಜಾಮೀನಿಗೆ ಶರತ್ ಅರ್ಜಿ ಸಲ್ಲಿಸಿರಲಿಲ್ಲ.
ಇನ್ನು, ಶಂಕರೀಪುರಂನಲ್ಲಿರುವ ಕಿರಣ್ ನಿವಾಸಕ್ಕೂ ಭೇಟಿ ನೀಡಿ, ಕೆಲ ಹೊತ್ತು ಪರಿಶೀಲನೆ ನಡೆಸಿ ಪೂರಕ ಮಾಹಿತಿ ಕಲೆ ಹಾಕಿತು. ವಲ್ಲಭಾಯ್ ರೋಡ್ ಪುನೀತ್ ಅವರ ವಿವೇಕ ನಗರದ ಮನೆ ಮೇಲೂ ರೇಡ್ ಮಾಡಲಾಯಿತು. SIT ಅಧಿಕಾರಿಗಳ ತಂಡ ಬೇಲೂರಿನ ನಲ್ಕೆ ಬಳಿ ಇರುವ ನವೀನ್ ಮನೆ ಮೇಲೆ ದಾಳಿ ಮಾಡಿದ್ದು, ಪೆನ್ ಡ್ರೈವ್ ಕೇಸ್ಗೆ ಸಂಬಂಧಪಟ್ಟ ವಿಚಾರದ ಮೇಲೆ ಪರಿಶೀಲನೆ ನಡೆಸಿದ್ದಾರೆ.
ಶರತ್, ಕಿರಣ್, ಮೊದಲಾದವರ ಮನೆ, ಕಚೇರಿ, ಬಾರ್, ಹೋಟೆಲ್ ಪ್ರವೇಶ, ಪರಿಶೀಲನೆಗೂ ಮುನ್ನ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಿ ನಂತರ SIT ಒಳ ಪ್ರವೇಶಿಸಿ ಶೋಧಕಾರ್ಯ ನಡೆಸಿತು. ಈ ಮೂಲಕ ಅಶ್ಲೀಲ ವಿಡಿಯೋ ಇದ್ದ ಪೆನ್ಡ್ರೈವ್ ವೈರಲ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ತಂಡ, ಇಂಚಿಂಚೂ ಮಾಹಿತಿ ಜಾಲಾಡುತ್ತಿದ್ದು, ಎಸ್ಐಟಿ ಬಲೆ, ಯಾರಿಗೆಲ್ಲ ಉರುಳಾಗಲಿದೆ ಎಂಬ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಪುತ್ರ ಪ್ರಜ್ವಲ್ ಹೆಸರಲ್ಲಿ ತಾಯಿ ಚಾಮುಂಡೇಶ್ವರಿಗೆ ಅರ್ಚನೆ ಮಾಡಿಸಿದ ಹೆಚ್.ಡಿ ರೇವಣ್ಣ..!