ಬೆಂಗಳೂರು : ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತಾದಾನ ನಡೆಯಲಿರುವ 14 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲೇ ದಿನದಿಂದಲೇ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಎರಡನೇ ಹಂತಕ್ಕೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏ. 19 ರಂದು ಕಡೆಯ ದಿನವಾಗಿದ್ದು, ಏ. 20 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ. 22 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
2ನೇ ಹಂತದಲ್ಲಿ ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ.
ಈಗಾಗಲೇ ಎರಡನೇ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಕೆಲ ಅಭ್ಯರ್ಥಿಗಳು ತಮ್ಮ ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಈ ಪೈಕಿ ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ನಟ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಕಣದಲ್ಲಿದ್ದಾರೆ. ಶಿವಮೊಗ್ಗದಲ್ಲಿ ಕಣಕ್ಕಿಳಿದ ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ ವೇಳೆ 89.05 ಕೋಟಿ ಆಸ್ತಿ ಎಂದು ಘೋಷಿಸಿಕೊಂಡಿದ್ದಾರೆ. 2014ರಲ್ಲಿ ಗೀತಾ ಶಿವರಾಜ್ಕುಮಾರ್ 27 ಕೋಟಿ ಆಸ್ತಿ ಘೋಷಣೆ ಮಾಡಿದ್ದರು. 10 ವರ್ಷದಲ್ಲಿ ಗೀತಾ ಆಸ್ತಿ 62 ಕೋಟಿಯಷ್ಟು ಹೆಚ್ಚಳವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಒಟ್ಟು ಆಸ್ತಿ ಮೌಲ್ಯ 12.45 ಕೋಟಿ ರೂಪಾಯಿ. ಶೆಟ್ಟರ್ ಚರಾಸ್ತಿ 2.63 ಕೋಟಿ ರೂ., ಸ್ಥಿರಾಸ್ತಿ 9.82 ಕೋಟಿ ರೂಪಾಯಿ ಹೊಂದಿದ್ದಾರೆ. ಶೆಟ್ಟರ್ ಬಳಿ 15.37 ಲಕ್ಷ ರೂ. ನಗದು, 43.94 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದ್ದು, 57.26 ಲಕ್ಷ ರೂ. ಸಾಲವಿದೆ. ಶೆಟ್ಟರ್ ಬಳಿ ಸ್ವಂತ ವಾಹನ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ಆಸ್ತಿ ಮಾಲ್ಯ 13.51 ಕೋಟಿ ರೂ. ಗಳಷ್ಟಿತ್ತು. ಒಂದು ವರ್ಷದಲ್ಲಿ 1 ಕೋಟಿ ಇಳಿಕೆಯಾಗಿದೆ.
ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿದ್ದಾರೆ. ಮೃಣಾಲ್ ಹೆಬ್ಬಾಳ್ಕರ್ ಅವರ ಒಟ್ಟು ಆಸ್ತಿ ಮೌಲ್ಯ 13 ಕೋಟಿ ರೂ. ಸಂಪತ್ತು, 6 ಕೋಟಿ ಸಾಲವಿದೆ.
ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಒಟ್ಟು ಆಸ್ತಿ ಮೌಲ್ಯ 52 ಕೋಟಿ ರೂಪಾಯಿಯಾಗಿದ್ದು, ಸ್ವಂತ ಕಾರಿಲ್ಲ. 2023 ರ ಅಸೆಂಬ್ಲಿ ಚುನಾವಣೆಯಲ್ಲಿ ಚರಾಸ್ತಿ, ಸ್ಥಿರಾಸ್ತಿ, ಸೇರಿ ಒಟ್ಟು 28.93 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರು.
ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಕುಟುಂಬದ ಆಸ್ತಿ ಕಳೆದ 5 ವರ್ಷದಲ್ಲಿ ದುಪ್ಪಟ್ಟಾಗಿದ್ದು, 11.13 ಕೋಟಿ ರೂ. ನಿಂದ 21.09 ಕೋಟಿ ರೂ.ಗೆ ಹೆಚ್ಚಾಳವಾಗಿದೆ. ಜೋಶಿ ಬಳಿ 14 ಕೋಟಿ ಸಂಪತ್ತು, ಸ್ವಂತ ಕಾರಿಲ್ಲ. ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ 21 ಕೋಟಿ. ರೂ ಸಂಪತ್ತು ಹೊಂದಿದ್ದಾರೆ. 5 ವರ್ಷದಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಆಸ್ತಿ 12. 87 ಕೋಟಿ ಇಳಿಕೆಯಾಗಿದೆ.
ರಾಯಚೂರು ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕ್ ಬಳಿ 8.9 ಕೋಟಿ ಆಸ್ತಿ, ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಬಳಿ 44.53 ಕೋಟಿ ರೂ ಆಸ್ತಿ ಹಾಗೂ ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಒಟ್ಟು ಆಸ್ತಿ ಮೌಲ್ಯ 32.84 ಕೋಟಿ ರೂಪಾಯಿ. ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ 2.06 ಕೋಟಿ ರೂಪಾಯಿಯ ಒಡತಿಯಾಗಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಖಾಸಗಿ ಬಸ್-ಕಾರಿನ ಮಧ್ಯೆ ಭೀಕರ ಅಪಘಾತ – ಮೂವರು ಸಾ*ವು, ಓರ್ವ ಗಂಭೀರ..!