ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ‘ಡೆವಿಲ್’ ಸಿನಿಮಾದ ಶೂಟಿಂಗ್ ವೇಳೆ ಎಡಗೈಗೆ ಪೆಟ್ಟಾಗಿತ್ತು. ಎಡಗೈ ನೋವಿನ ನಡುವೆಯೇ ಚಿತ್ರೀಕರಣದಲ್ಲಿ ಅವರು ಭಾಗವಹಿಸಿದ್ದರು. ಇದೀಗ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದರ್ಶನ್ ಕೈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.
“ಡೆವಿಲ್” ಸಿನಿಮಾದ ಸಾಹಸ ಸನ್ನಿವೇಶ ಶೂಟಿಂಗ್ ಮಾಡುತ್ತಿರುವ ಸಮಯದಲ್ಲಿ ಅವರ ಎಡ ಕೈಗೆ ಏಟು ಬಿದ್ದಿತ್ತು. ಕೈಗೆ ಬೆಲ್ಟ್ ಕಟ್ಟಿಕೊಂಡೆ ಈವರೆಗೂ ಎಲ್ಲಾ ಕಾರ್ಯಕ್ರಮದಲ್ಲಿ ದರ್ಶನ್ ಭಾಗವಹಿಸುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ದರ್ಶನ್ ಇದೀಗ ಆಪರೇಷನ್ ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಟ ವಿಶ್ರಾಂತಿ ಪಡೆಯುತ್ತಿರುವ ವಿಚಾರ ಕೇಳಿ ಅಭಿಮಾನಿಗಳಿಗೂ ಖುಷಿಯಾಗಿದೆ.
ಏ.4ರಂದು ಮಂಡ್ಯದಲ್ಲಿ ನಡೆದ ಸುಮಲತಾ ಅವರ ಬಹಿರಂಗ ಸಭೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದರು. ಈ ವೇಳೆ, ದರ್ಶನ್ ಅವರೇ ಆಸ್ಪತ್ರೆಗೆ ಅಡ್ಮಿಟ್ ಆಗಿ ಆಪರೇಷನ್ಗೆ ಒಳಗಾಗಲಿದ್ದೇನೆ ಎಂದು ತಿಳಿಸಿದ್ದರು. ಇದೀಗ, ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಅಭಿಮಾನಿ ಜತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಬೇಗ ಗುಣಮುಖರಾಗಿ ಎಂದು ದರ್ಶನ್ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ : ಏ.14ರಂದು ರಾಜ್ಯಕ್ಕೆ ನಮೋ ಆಗಮನ – ಚಿಕ್ಕಬಳ್ಳಾಪುರದಲ್ಲಿ ಸಮಾವೇಶ, ಬೆಂಗಳೂರಲ್ಲಿ ಬೃಹತ್ ರೋಡ್ ಶೋ..!