ಸ್ಯಾಂಡಲ್ವುಡ್ನಲ್ಲಿ ಇತ್ತೀಚಿಗೆ ಸಾಕಷ್ಟು ವಿಭಿನ್ನ ಪ್ರಯತ್ನ ಮತ್ತು ಪ್ರಯೋಗಗಳಾಗುತ್ತಿವೆ. ಅಂಥ ಚಿತ್ರಗಳ ಸಾಲಿಗೆ ಇದೀಗ ‘ನಿಮಗೊಂದು ಸಿಹಿ ಸುದ್ದಿ’ ಸಹ ಸೇರ್ಪಡೆಯಾಗುತ್ತಿದೆ. ಮಹಾಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 28ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೇಲರ್, ಗುರುವಾರ ಸಂಜೆ MMB Legacyಯಲ್ಲಿ ಬಿಡುಗಡೆಯಾಗಿದೆ.

ಯುವಕನೊಬ್ಬ ಗರ್ಭಧರಿಸಿ ಅಚ್ಚರಿ ಹುಟ್ಟಿಸುವ ವಿಷಯದ ಸುತ್ತ ಸಾಗುವ ಕಥೆ ಈ ಚಿತ್ರದಲ್ಲಿದ್ದು ನಾಯಕ ಕಂ ನಿರ್ದೇಶಕ ರಘು ಭಟ್ ಅವರಿಗೆ ಚಿತ್ರತಂಡದವರೆಲ್ಲಾ ಸೀಮಂತಶಾಸ್ತ್ರ ಮಾಡುವ ಮೂಲಕ ಟ್ರೇಲರ್ ಬಿಡುಗಡೆ ಮಾಡಲಾಯ್ತು. ರಘು ಭಟ್ ಅವರನ್ನು ವೇದಿಕೆಗೆ ಸಂಭ್ರಮದಿಂದ ಬರಮಾಡಿಕೊಂಡು, ಆ ನಂತರ ಅವರಿಗೆ ಸೀಮಂತ್ರ ಶಾಸ್ತ್ರ ಮಾಡಲಾಯಿತು. ನಂತರ ಚಿತ್ರತಂಡದವರೆಲ್ಲಾ ಸೇರಿ ಟ್ರೇಲರ್ ಬಿಡುಗಡೆ ಮಾಡಿದರು. ಈ ಟ್ರೇಲರ್ ಇದೀಗ ಯೂಟ್ಯೂಬ್ನ ಎ2 ಮ್ಯೂಸಿಕ್ ಚಾನಲ್ನಲ್ಲಿ ಲಭ್ಯವಿದೆ.

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ನಾಯಕನಾಗಿ ನಟಿಸಿರುವ ರಘು ಭಟ್ ಅವರು, ‘ಇದಕ್ಕೂ ಮೊದಲು ಪುರುಷರು ಗರ್ಭ ಧರಿಸಿದ ಚಿತ್ರವೊಂದು ಹಲವು ವರ್ಷಗಳ ಹಿಂದೆ ಹಾಲಿವುಡ್ನಲ್ಲಿ ಬಂದಿತ್ತು. ಕೇರಳದಲ್ಲಿ ಇಂಥದ್ದೊಂದು ಪ್ರಯತ್ನ ಆಗಿದ್ದು, ಅಲ್ಲೊಂದು ಕಥೆ ಇದೆ. ಆದರೆ, ನಮ್ಮ ಕಥೆ ಇದ್ಯಾವುದಕ್ಕೂ ಸಂಬಂಧವಿಲ್ಲ. ಇದೊಂದು ವಿಭಿನ್ನ ಪ್ರಯತ್ನ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪರಿಕಲ್ಪನೆಯನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಚಿತ್ರದ ಬಗ್ಗೆ ಸ್ವಲ್ಪ ಬಿಟ್ಟುಕೊಟ್ಟರೂ, ಸ್ವಾರಸ್ಯವಿರುವುದಿಲ್ಲ. ಚಿತ್ರಮಂದಿರದಲ್ಲೇ ನೋಡಿದರೆ ಚೆನ್ನಾಗಿರುತ್ತದೆ’ ಎಂದರು.

ಈ ಚಿತ್ರವನ್ನು ಎಲ್ಲ ಮಹಿಳೆಯರಿಗೆ ಅರ್ಪಿಸುವುದಾಗಿ ಹೇಳುವ ರಘು ಭಟ್, ‘ಈ ಚಿತ್ರದ ಕಥೆ ಬರೆಯುವುದಕ್ಕೆ ನಮ್ಮ ತಾಯಿ ಸ್ಫೂರ್ತಿ. ನಿನ್ನನ್ನು ಒಂಬತ್ತು ತಿಂಗಳು ಹೆತ್ತು-ಹೊತ್ತಿದ್ದಕ್ಕೆ ಈ ರೀತಿ ಮಾಡಿದ ಎಂಬ ಮಾತು ಸಹಜವಾಗಿ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಒಂದು ಮಾತು ಕೇಳಿಬರುತ್ತದೆ. ನಾನು ಒಮ್ಮೆ ಇಂಥದ್ದೊಂದು ಮಾತು ಕೇಳಬೇಕಾಯಿತು. ಒಬ್ಬ ತಾಯಿ ಇಷ್ಟೊಂದು ನೋವು ಅನುಭವಿಸಬೇಕಾದರೆ, ಯಾಕೆ ಈ ವಿಷಯನ್ನು ಇಟ್ಟುಕೊಂಡು ಚಿತ್ರ ಮಾಡಬಾರದು ಎಂಬ ಯೋಚನೆ ಹೊಳೆದು, ಈ ಕಥೆ ಬರೆದೆ. ಇದನ್ನು ಎಲ್ಲಾ ತಾಯಂದಿರು, ಅಕ್ಕಂದಿರಿಗೆ ಅರ್ಪಿಸುತ್ತಿದ್ದೇವೆ ಎಂದರು.

ಈ ತರಹದ ಹೊಸ ಪ್ರಯತ್ನಗಳಿಗೆ ಪ್ರೇಕ್ಷಕರಿಂದ ಖಂಡಿತಾ ಮೆಚ್ಚುಗೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುವ ರಘು ಭಟ್, ‘ಹೊಸ ತರಹದ ಪ್ರಯೋಗಗಳನ್ನು ಪ್ರೇಕ್ಷಕರು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿಂದ ಸಿನಿಮಾ ಮಾಡಿರುತ್ತೇವೆ. ಪ್ರೇಕ್ಷಕರು ಬುದ್ಧಿವಂತರು. ಅವರು ಇಂತಹ ಪ್ರಯೋಗಗಳನ್ನು ಗುರುತಿಸುವುದಷ್ಟೇ ಅಲ್ಲ, ಬೆಂಬಲಿಸುತ್ತಾ ಬಂದಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ, ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣ ಪತ್ರ ನೋಡಿದ್ದಾರೆ. ಜನ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.
‘ನಿಮಗೊಂದು ಸಿಹಿ ಸುದ್ದಿ’ ಚಿತ್ರವನನು ಅವ್ಯಕ್ತ ಸಿನಿಮಾಸ್ ಸಂಸ್ಥೆಯಡಿ ಹರೀಶ್ ಎನ್. ಗೌಡ ನಿರ್ಮಾಣ ಮಾಡಿದ್ದಾರೆ. ಚಿತ್ರದ ಬಗ್ಗೆ ಅವರು ಮಾತನಾಡಿ, ‘ರಘು ಭಟ್ ಅವರು ನನ್ನ ಜಿಮ್ ಟ್ರೇನರ್. ಒಮ್ಮೆ ವರ್ಕೌಟ್ ಮಾಡುವಾಗ, ಅವರು ಈ ಕಥೆ ಹೇಳಿದರು. ಈ ತರಹದ ಪ್ರಯೋಗಗಳಿಗೆ ಬೆಂಬಲ ಸಿಗುತ್ತದಾ ಎಂಬ ಭಯ ಇತ್ತು. ಮನೆಯವರು ಸಹ ಬೇಡ ಎಂದರು. ಮತ್ತೆ ಎರಡ್ಮೂರು ಬಾರಿ ಕಥೆ ಕೇಳಿ, ಇಂಥದ್ದೊಂದು ಸವಾಲು ಸ್ವೀಕರಿಸಲು ಮುಂದಾದೆ. ಚಿತ್ರ ಬಹಳ ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೆ ಎಲ್ಲೂ ಮೋಸವಾಗುವುದಿಲ್ಲ, ನಗಿಸುವುದರ ಜೊತೆಗೆ ಸಾಕಷ್ಟು ಥ್ರಿಲ್ಲಿಂಗ್ ಅಂಶಗಳಿವೆ’ ಎಂದರು.
‘ನಿಮಗೊಂದು ಸಿಹಿ ಸುದ್ದಿ’ ಚಿತ್ರದಲ್ಲಿ ರಘು ಜೊತೆಗೆ ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್, ಪ್ರಜ್ವಲ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ಸುಂದರೇಶ್ ಛಾಯಾಗ್ರಹಣ, ಅಶ್ವಿನ್ ಹೇಮಂತ್ ಸಂಗೀತವಿದೆ.
ಇದನ್ನೂ ಓದಿ : http://ನ್ಯೂಸ್ ಚಾನಲ್ ಸರ್ವರ್ಗಳಿಗೆ ಕನ್ನ – ವಂಚಕ ಸಂತೋಷ್ ಅರೆಸ್ಟ್!









