ದಾವಣಗೆರೆ : ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ‘ರಾಜ್ಯ ಸರ್ಕಾರ ಕೆಡವಲು 1000 ಕೋಟಿ ರೆಡಿಯಾಗಿದೆ’ ಎಂದು ಹೇಳಿಕೆ ನೀಡಿದ ಶಾಸಕ ಯತ್ನಾಳ ವಿರುದ್ಧ ದಾವಣಗೆರೆ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ಬೆಂಗಳೂರಿನ ಹೈಗೌಂಡ್ಸ್ ಠಾಣೆಗೆ ನೀಡಿದ ದೂರು ದಾವಣಗೆರೆ ಗಾಂಧಿನಗರ ಠಾಣೆಗೆ ವರ್ಗಾವಣೆಗೊಂಡಿದ್ದು, ಇದೀಗ ಯತ್ನಾಳ ವಿರುದ್ಧ ದಾವಣಗೆರೆಯ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೆಪ್ಟೆಂಬರ್ 26ರಂದು ದಾವಣಗೆರೆ ಜಿ ಎಂಐಟಿ ಗೆಸ್ಟ್ ಹೌಸ್ನಲ್ಲಿ ಶಾಸಕ ಯತ್ನಾಳ ಅವರು ನೀಡಿರುವ ಹೇಳಿಕೆ ಆಧರಿಸಿ ಎಸ್.ಮನೋಹರ್ ದೂರು ನೀಡಿದ್ದರು.
‘ರಾಜ್ಯದ ಮತದಾರರು ಕಾಂಗ್ರೆಸ್ಗೆ 135 ಸ್ಥಾನಗಳನ್ನು ನೀಡಿ ಐದು ವರ್ಷ ಸುಭದ್ರ ಆಡಳಿತ ನಡೆಸಲು ಜನಾದೇಶ ಕೊಟ್ಟಿದ್ದಾರೆ. ಅಧಿಕಾರವಿಲ್ಲದೇ ಹತಾಶರಾಗಿರುವ ಬಿಜೆಪಿಯ ಕೆಲ ನಾಯಕರು ರಾಜ್ಯ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸಿದ್ದು ಯತ್ನಾಳ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಅಕ್ರಮ ಹಣ ವರ್ಗಾವಣೆ ನಡೆಯುತ್ತಿದ್ದು, ಹೇಳಿಕೆ ನೀಡಿದ ಯತ್ನಾಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು.. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಸಲ್ಲಿಸಿದ್ದ ಖಾಸಗಿ ದೂರನ್ನು ಆಗಸ್ಟ್ 29 ರಂದು ಮಾನ್ಯ ಮಾಡಿದ್ದ ನ್ಯಾಯಾಲಯ ಶಾಸಕ ಯತ್ನಾಳ್ ಅಕ್ಟೋಬರ್ 16 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಆದ್ರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಇದನ್ನೂ ಓದಿ : ಸ್ಕಿಡ್ ಆಗಿ ಸೇತುವೆಯಿಂದ ಘಟಪ್ರಭಾ ನದಿಗೆ ಬಿದ್ದ ಬೈಕ್.. ದಂಪತಿ ಸಾವು..!