ಉಡುಪಿ : ಜಿಲ್ಲೆಯಾದ್ಯಂತ ವರುಣನ ರಣಾರ್ಭಟ ಮುಂದುವರೆದಿದ್ದು, ಸತತ ನಾಲ್ಕು ದಿನಗಳಿಂದಲೂ ಉಡುಪಿಯಲ್ಲಿ ಧಾರಕಾರ ಮಳೆ ಸುರಿಯುತ್ತಿದೆ. ಬೈಂದೂರು ತಾಲೂಕಿನ ಸುಮಾರು 40 ಶಾಲೆಗಳಿಗೆ ರಜೆ ಘೊಷಿಸಲಾಗಿದೆ. ಕುಂದಾಪುರ ಶಿಕ್ಷಣ ವಲಯದ ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ರಜೆ ಘೊಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಜೆ ನೀಡಲಾಗಿದ್ದು, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಮನೆಗಳು ಜಲಾವೃತವಾಗಿದ್ದು, ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ವೆಂಕಟರಮಣ ಲೇಔಟ್ನ ಹಲವು ಮನೆಗಳು ಜಲಾವೃತವಾಗಿದೆ.
ಉಡುಪಿಯಲ್ಲಿ ನಗರದಲ್ಲಿ ನೆರೆ ಹಾವಳಿ ಎದುರಾಗಿದ್ದು, ಅಂಬಾಗಿಲು ಕಲ್ಸಂಕ ರಸ್ತೆಯಲ್ಲಿ ಸಂಪೂರ್ಣ ಜಲಾವೃತವಾಗಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಬಹುಮುಖ್ಯ ರಸ್ತೆಯಲ್ಲಿ ನೀರು ತುಂಬಿ ಜನರು ಪರದಾಡುವಂತಾಗಿದೆ. ನಿನ್ನೆ ಮಧ್ಯಾಹ್ನದಿಂದ ಎಡಬಿಡದೆ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ, ಉಡುಪಿ ನಗರ ವ್ಯಾಪ್ತಿಯ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ನೆರೆ ಬಂದಿದೆ. ಚರಂಡಿ ಬಿಟ್ಟು ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ವಾಹನ ಸಂಚಾರರು ದುಸ್ತರ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಕುಮಟಾ ತಾಲೂಕಿನ ವಾಲಗಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋಟೆಗುಡ್ಡದಲ್ಲಿ ವಾಸ್ತವ್ಯದ ಮನೆ ನೆಲಸಮವಾಗಿ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಕೋಟೆಗುಡ್ಡದ ರಘು ಹಮ್ಮು ಮುಕ್ರಿಗೆ ಸೇರಿದ ಮನೆ ಸಂಪೂರ್ಣವಾಗಿ ನೆಲ ಸಮವಾಗಿದ್ದು ಮನೆಯಲ್ಲಿದ್ದ ದಿನಸಿ ಸಾಮಗ್ರಿ, ಬಟ್ಟೆ, ಪಾತ್ರೆ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದೆ.
ಮನೆ ಗೋಡೆ ಕುಸಿದು ಬಿಳುವ ಸಮಯದಲ್ಲಿ ಮನೆಯೊಳಗೆ ಯಾರು ಇಲ್ಲದೆ ಇರುವುದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಟುಂಬಸ್ಥರಿಗೆ ಕೋಟೆಗುಡ್ಡದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷೆ ಶಾಂತಿ ಮಡಿವಾಳ, ಕಂದಾಯ ಅಧಿಕಾರಿಗಳು, ನೋಡಲ್ ಅಧಿಕಾರಿ ವಿನಾಯಕ ವೈದ್ಯ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ದುರಹಂಕಾರ ತೋರಿಸಿದ ಐಪಿಎಸ್ ಅಧಿಕಾರಿ ವಿರುದ್ಧ ಡಿಜಿಪಿಗೆ ದೂರು..!