ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನಲೆ ಕಳೆದ 2 ತಿಂಗಳಿನಿಂದ ಜಾರಿಯಾಗಿದ್ದ ನೀತಿ ಸಂಹಿತೆ ಸಡಿಲಗೊಳಿಸಲು ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ. ಸರ್ಕಾರ ಕೇಳಿದ್ದ ಕೆಲವೇ ಪ್ರಸ್ತಾವನೆಗಳಿಗೆ ಸೀಮಿತವಾಗಿ ಷರತ್ತುಬದ್ಧ ವಿನಾಯ್ತಿಯನ್ನು ಆಯೋಗ ನೀಡಿದೆ. ಬರ ಪರಿಹಾರ ಕಾಮಗಾರಿಗಳ ಪರಾಮರ್ಶೆ, ಮೂಲಭೂತ ಸೌಲಭ್ಯ, ಅಭಿವೃದ್ಧಿ ಕಾಮಗಾರಿ, ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಟೆಂಡರ್ ಆಹ್ವಾನ, ಅಂತಿಮಗೊಳಿಸುವಿಕೆ, ಕಾರ್ಯದೇಶ ನೀಡುವಿಕೆ ಮತ್ತು ನಿಗಮ-ಮಂಡಳಿಗಳಿಗಳ ಶಾಸನಾತ್ಮಕ ಸಭೆಗಳನ್ನು ನಡೆಸಲು ನೀತಿ ಸಂಹಿತೆ ಸಡಿಲಗೊಳಿಸಿ ಆದೇಶ ನೀಡಿದೆ.
ಕರ್ನಾಟಕಕ್ಕೂ ಮೊದಲು ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯ ಮತದಾನ ಮುಗಿದಿತ್ತು. ತತ್ಕ್ಷಣವೇ ನೀತಿ ಸಂಹಿತೆ ತೆರವಿಗೆ ತಮಿಳುನಾಡು ಸರಕಾರ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅದನ್ನು ಚುನಾವಣ ಆಯೋಗ ತಿರಸ್ಕರಿಸಿತ್ತು. ಇದರಿಂದ ಪಾಠ ಕಲಿತ ಕರ್ನಾಟಕ ಸರಕಾರ, ನಿರ್ದಿಷ್ಟ ಪ್ರಕರಣಗಳಿಗೆ ಸೀಮಿತವಾಗಿ ನೀತಿ ಸಂಹಿತೆಯನ್ನು ಸಡಿಲಗೊಳಿಸುವಂತೆ ಕೋರಿತ್ತು.
ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ವಿಧಾನಪರಿಷತ್ತಿನ 6 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ್ದರಿಂದ ನೀತಿ ಸಂಹಿತೆ ಮುಂದುವರಿದಿತ್ತು. ಹೀಗಾಗಿ ಸದಾಚಾರ ಸಂಹಿತೆಯನ್ನು ಸಡಿಲ ಮಾಡುವುದಿಲ್ಲ ಎನ್ನುವ ಸಾಧ್ಯತೆಗಳೇ ಹೆಚ್ಚಿತ್ತು. ಆದರೆ, ರಾಜ್ಯದಲ್ಲಿ ಬರಗಾಲವಿದ್ದುದರಿಂದ ತುರ್ತು ಆವಶ್ಯಕತೆಗಳನ್ನು ಪೂರೈಸುವುದು ಸೇರಿದಂತೆ ಕೆಲ ನಿತ್ಯನೈಮಿತ್ತಿಕ ಆಗು-ಹೋಗುಗಳಿಗೆ ಸಂಬಂಧಿಸಿದ ನಿರ್ವಹಣೆ ಮಾಡಲು ಆಯೋಗ ಅನುಮತಿಸಿದೆ.
ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಸರಕಾರವು ಬರಪೀಡಿತ ಎಂದು ಘೋಷಿಸಿದೆ. ಜಿಲ್ಲಾಡಳಿತಗಳಿಂದ ತೆಗೆದುಕೊಂಡಿರುವ ಬರ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸುವ ತುರ್ತು ಆವಶ್ಯಕತೆ ಇದೆ. ಹೀಗಾಗಿ ಚುನಾವಣ ಆಯೋಗದ ಪರಿಶೀಲನ ಸಮಿತಿಯು ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಹಾರ ಕಾಮಗಾರಿಗಳ ಪರಾಮರ್ಶೆ ಮಾಡಲು ನೀತಿ ಸಂಹಿತೆ ಸಡಿಲಗೊಳಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಾಮರ್ಶನ ಸಭೆ ಅಥವಾ ವೀಡಿಯೋ ಸಂವಾದ ನಡೆಸಲು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಿಗೆ ಅನುಮತಿ ನೀಡಬೇಕು.
ಇದನ್ನೂ ಓದಿ : ದೆಹಲಿಯಲ್ಲಿ AAP-BJP ಬಿಗ್ ವಾರ್ – ಬಿಜೆಪಿ ಆಫೀಸ್ಗೆ ನುಗ್ಗಲು AAP ಪ್ಲಾನ್..!