ಮಂಡ್ಯ : ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಮತ್ತೆ ಮಂಡ್ಯದಲ್ಲಿ ಹನುಮ ಧ್ವಜ ಅಭಿಯಾನ ಮುಂದುವರಿದಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೇತೃತ್ವದಲ್ಲಿ ಮಂಡ್ಯ ನಗರದಲ್ಲೂ ಅಭಿಯಾನ ಆರಂಭವಾಗಿದೆ. ಮಂಡ್ಯ ಸಿಟಿಯ ಮನೆಗಳಿಗೆ ಬಿಜೆಪಿಯಿಂದ ಹನುಮ ಧ್ವಜ ವಿತರಣೆಯಾಗಿದೆ. ಇಂದಿನ ಅಭಿಯಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳ ಭಾಗಿಯಾಗಿದ್ದರು.
ಇಂದು ಬಿಜೆಪಿ ಮಹಿಳಾ ಕಾರ್ಯಕರ್ತರನ್ನೂ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದು, ಇಡೀ ಮಂಡ್ಯ ಜಿಲ್ಲಾದ್ಯಂತ ಮನೆ ಮನೆಗಳಿಗೆ ಹನುಮ ಧ್ವಜ ವಿತರಣೆ ಮಾಡಿದ್ದಾರೆ.
ಏನಿದು ವಿವಾದ?
ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಆಂಜನೇಯ ದೇಗುಲದ ಎದುರು ಹನುಮ ಧ್ವಜವನ್ನು ಸ್ಥಳೀಯರು ಹಾಗೂ ಬಿಜೆಪಿ ಮುಖಂಡರು ಕಟ್ಟಿದ್ದರು. ಇದಕ್ಕೆ ಸ್ಥಳೀಯವಾಗಿ ಅನುಮತಿಯನ್ನೂ ಪಡೆಯಲಾಗಿತ್ತು. ಎರಡು ದಿನದ ಹಿಂದೆ ಏಕಾಏಕಿ ಹನುಮಧ್ವಜವನ್ನು ತೆರವುಗೊಳಿಸಲಾಗಿತ್ತು. ಇದಕ್ಕೆ ಅನುಮತಿ ನೀಡಿಲ್ಲ ಎಂದು ಕೆಲವರು ತೆರವುಗೊಳಿಸಿದ್ದರು.
ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರ ಕುಮ್ಮಕ್ಕಿನಿಂದಲೇ ಹನುಮ ಧ್ವಜವನ್ನು ತೆರವುಗೊಳಿಸಲಾಗಿದೆ ಎನ್ನುವುದು ಬಿಜೆಪಿ ಹಾಗೂ ಜೆಡಿಎಸ್ ಆರೋಪವಾಗಿತ್ತು. ಈ ವಿಚಾರವಾಗಿ ಸಂಘರ್ಷ ಏರ್ಪಟ್ಟಿದ್ದು, ಪ್ರತಿಭಟನೆಗಳು ನಡೆದಿವೆ. ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಅವರ ಫ್ಲೆಕ್ಸ್ಗಳನ್ನು ಹರಿದು ಬೆಂಕಿ ಹಚ್ಚಲಾಗಿದೆ. ಕೆಲವು ಕಡೆ ಕಲ್ಲು ತೂರಾಟವೂ ನಡೆದಿದೆ.
ಇದನ್ನೂ ಓದಿ : ಫೆಬ್ರವರಿ 10ರಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ – ಮಹತ್ವದ ಸಭೆ..!