ಬೆಂಗಳೂರು : ಬಿಬಿಎಂಪಿಗೆ ಚುನಾವಣೆ ನಡೆಸುವುದು ಬೇಡ. ಸರ್ಕಾರ, ರಾಜ್ಯ ಚುನಾವಣಾ ಆಯೋಗ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸೇರಿ ನನ್ನನ್ನೇ ಮೇಯರ್ ಎಂದು ಘೋಷಿಸಿ ಎಂದು ನಾಗರಿಕರೊಬ್ಬರು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಲ್ಯಾವೆಲ್ಲೆ ರಸ್ತೆ ನಿವಾಸಿ ಮುರುಳಿ ಕೃಷ್ಣ ಬ್ರಹ್ಮಾನಂದಂ ಎನ್ನುವವರು ಈ ರೀತಿಯ ವಿಚಿತ್ರ ಬೇಡಿಕೆಯಿಟ್ಟಿದ್ದಾರೆ. ಈ ಅರ್ಜಿಯನ್ನು ವಜಾಗೊಳಿಸುವಂತೆ ಸರ್ಕಾರಿ ವಕೀಲರು ಮನವಿ ಮಾಡಿದ್ದಾರೆ. ಆದರೆ ಪಿಐಎಲ್ ತಿರಸ್ಕರಿಸಲು ನ್ಯಾಯಾಲಯ ನಿರಾಕರಿಸಿದೆ.
ಇಂಥದ್ದೊಂದು ವಿಚಿತ್ರ ಪಿಐಎಲ್ ಸಲ್ಲಿಸಿದ ಮಹಾನುಭಾವ ಯಾರು..? ಅರ್ಜಿ ಹಾಕಿದ್ದು ಯಾರೆಂದು ನೋಡಬೇಕೆಂದು ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ, ನ್ಯಾ.ಕೆ.ವಿ ಅರವಿಂದ್ ಪೀಠ ಹೇಳಿದ್ದಾರೆ.
ಮಧ್ಯಂತರ ಮೇಯರ್ ಮಾಡಲು ಮನವಿ
ಅರ್ಜಿದಾರರು ” ಬಿಬಿಎಂಪಿ ಚುನಾವಣೆ ವಿಳಂಬವಾಗಿರುವುದು, ವಾರ್ಡ್ ಮರುವಿಂಗಡಣೆ, ಬಿಬಿಎಂಪಿ ಕಾಯಿದೆ-2020 ಇದೆಲ್ಲವೂ ಅವೈಜ್ಞಾನಿಕವಾಗಿದೆ ಎಂದು ದೂರಿದ್ದಾರೆ. ಬಿಬಿಎಂಪಿಗೆ ನೇರವಾಗಿ ಜನರಿಂದಲೇ ಮೇಯರ್ ಅವರನ್ನು ಆಯ್ಕೆ ಮಾಡಬೇಕೆಂಬ ಬೇಡಿಕೆ 2018ರಲ್ಲಿಸಾರ್ವಜನಿಕರಿಂದ ಬಂದಿತ್ತು. ಆದ್ದರಿಂದ ಬಿಬಿಎಂಪಿಗೆ ಚುನಾವಣೆ ನಡೆಸಬಾರದು ಎಂದು ಸರ್ಕಾರ, ಚುನಾವಣಾ ಆಯೋಗ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು. ಜತೆಗೆ ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸೇರಿ ತಮ್ಮನ್ನು ಮಧ್ಯಂತರ ಮೇಯರ್ ಆಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿಕೊಳ್ಳಲು ನಿರ್ದೇಶನ ನೀಡಬೇಕು” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ರಷ್ಯಾದಲ್ಲಿ ಮಹತ್ವದ ‘ಬ್ರಿಕ್ಸ್’ ಸಮ್ಮೇಳನ – 5 ವರ್ಷಗಳ ಬಳಿಕ ಮೋದಿ, ಜಿನ್ಪಿಂಗ್ ಮಾತುಕತೆ..!