ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಕೆಲ ದರ್ಶನ್ ರೌಡಿ ಅಭಿಮಾನಿಗಳು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ರಾದ್ಧಾಂತ ಮಾಡಿದ್ದರು. ಈ ಬಗ್ಗೆ ನಟ ಪ್ರಥಮ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೂಡ ದರ್ಶನ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಬಳಿಕ ಉಮಾಪತಿಗೌಡಗೆ ಬಾಯಿಗೆ ಬಂದಂತೆ ದರ್ಶನ್ ಅಭಿಮಾನಿ ಚೇತನ್ ಎಂಬಾತ ಅವಾಚ್ಯ ಪದಗಳಿಂದ ಪೊಲೀಸ್ ಠಾಣೆ ಮುಂದೆಯೇ ನಿಂದನೆ ಮಾಡಿದ್ದ.
ಇದೀಗ ಪ್ರಥಮ್, ಉಮಾಪತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ದರ್ಶನ್ ಅಭಿಮಾನಿ ಚೇತನ್ ಎಂಬಾತನಿಗೆ ಪೊಲೀಸರು ಬುದ್ದಿ ಕಲಿಸಿದ್ದಾರೆ. ಲಾಠಿ ರುಚಿ ತೋರಿಸ್ತಿದ್ದಂತೆ ಬಾಲಮುದುರಿದ ಚೇತನ್, ವೀಡಿಯೋ ಮಾಡಿ ಉಮಾಪತಿಗೌಡ, ಪ್ರಥಮ್ಗೆ ಕೈ ಮುಗಿದು ಕ್ಷಮೆ ಕೇಳಿದ್ದಾನೆ. ಚೇತನ್ ಅಂದು ಯುಟ್ಯೂಬರ್ ರಜನಿ ಹೇಳಿದ ಮಾತು ಕೇಳಿ ಅನ್ನಪೂರ್ಣ ಪೊಲೀಸ್ ಠಾಣೆ ಹತ್ತಿರ ಬಂದು ಎಲ್ಲರಿಗೂ ಬೆದರಿಕೆ ಹಾಕಿ ಹೋಗಿದ್ದ. ಇಂದು ಪೊಲೀಸರು ಆತನಿಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟಿದ್ದಾರೆ. ಚಡ್ಡಿಯಲ್ಲೇ ಚೇತನ್ ಪೊಲೀಸ್ ಠಾಣೆಯಲ್ಲಿ ಕ್ಷಮೆ ಕೋರಿದ್ದಾನೆ. ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಚೇತನ್ ಕ್ಷಮೆ ಕೇಳಿರುವ ವಿಡಿಯೋದಲ್ಲೇನಿದೆ? “ನನ್ನ ಹೆಸರು ಚೇತನ್. ನಾನು ದರ್ಶನ್ ಅಭಿಮಾನಿ. ಅವತ್ತು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಬಳಿ ಹೋಗಿದ್ದೆ. ಉಮಾಪತಿ ಹಾಗೂ ಪ್ರಥಮ್ ಅವರ ಬಗ್ಗೆ ಮಾತನಾಡಿದ್ದೆ. ಕಾನೂನು ಪ್ರಕಾರ ಏನಿದೆ, ನಾನು ಅವರಿಗೆ ತಲೆ ಬಾಗುತ್ತೇನೆ. ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿಬಿಡಿ” ಎಂದು ಕೇಳಿಕೊಂಡಿದ್ದಾನೆ.
ಇನ್ನು, ಇದೇ ರೀತಿ ಕೆಟ್ಟ ಕಮೆಂಟ್ ಮಾಡ್ತಿರೋ ದರ್ಶನ್ ರೌಡಿ ಫ್ಯಾನ್ಸ್ ಬೆನ್ನತ್ತಿ ಪೊಲೀಸರು ಲಾಠಿ ಪಾಠ ಕಲಿಸುತ್ತಿದ್ದಾರೆ. ದರ್ಶನ್ ರೌಡಿ ಫ್ಯಾನ್ಸ್ಗಳೇ ನಿಮಗೆ ಮುಂದೈತೆ ಮಾರಿ ಹಬ್ಬ.
ರೌಡಿ ಆಟ ಆಡಿದ್ರೆ, ಬಾಲ ಬಿಚ್ಚಿದ್ರೆ ಪೊಲೀಸರು ಕಲಿಸ್ತಾರೆ ಪಾಠ. ದರ್ಶನ್ ವಿಚಾರಣೆ ವೇಳೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಸುತ್ತಾ ಅಭಿಮಾನಿಗಳು ಜಮಾಯಿಸಿ ಜೈಕಾರ ಹಾಕಿದ್ದರಿಂದ ಸಾಕಷ್ಟು ಸಮಸ್ಯೆ ಆಗಿತ್ತು. ಕೆಲವರು ಮಾಧ್ಯಮದವರ ಮೇಲೆ ಕೂಡ ಹಲ್ಲೆ ಮಾಡಲು ಯತ್ನಿಸಿದರು. ಪೊಲೀಸರು ಲಘು ಲಾಠಿ ಪ್ರಹಾರ ಸಹ ಮಾಡಿದ್ದರು.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್ನ ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್..!