ಬೆಂಗಳೂರು : ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಕಣ ರಂಗೇರುತ್ತಿದೆ. ಅದರಲ್ಲೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣದಲ್ಲಿ ರಣತಂತ್ರಗಳು ಜೋರಾಗುತ್ತಿವೆ.
ಅಭ್ಯರ್ಥಿಗಳು ಅಖಾಡಕ್ಕೆ ಇಳಿಯುವ ಮುನ್ನವೇ ಮಾತಿನೇಟು ಶುರುವಾಗಿದೆ. JDS ಸಹವಾಸ ಬೇಡ ಎಂದ ಯೋಗೇಶ್ವರ್ ಮೇಲೆ ಹೆಚ್ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಯೋಗೇಶ್ವರ್ ವಿರುದ್ಧ ಹೆಚ್ಡಿಕೆ ಕೆಂಡ ಕಾರಿದ್ದಾರೆ.
ಮೋದಿ & NDA ಸಂಬಂಧ ಉಳಿಸಿಕೊಳ್ಳಲು ನೆಲದವರೆಗೂ ಬಗ್ಗಿದ್ದೇನೆ, ಇನ್ನೂ ಬಗ್ಗಲೂ ನನ್ನಿಂದ ಸಾಧ್ಯವೇ ಇಲ್ಲ. ನಡ್ಡಾ ಕೂಡ ಜೆಡಿಎಸ್ನಿಂದ ಯೋಗೇಶ್ವರ್ ಸ್ಪರ್ಧೆ ಮಾಡಿಸಿ ಎಂದಿದ್ರು. ಇದಕ್ಕಿಂತ ಇನ್ನೂ ಏನೂ ಹೇಳಲು ಸಾಧ್ಯವಿಲ್ಲ, ಇನ್ನು 3 ದಿನ ಇದೆ ಎಲ್ಲ ಕಾರ್ಯಕರ್ತರು ಒಟ್ಟಾಗಿ ಇರಿ, ಮುಂದೇ ಏನ್ ಆಗುತ್ತೋ ನೋಡೋಣ ಎಂದು ಹೆಚ್ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಸದ್ಯ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯೋಗೇಶ್ವರ್ ಗುರುವಾರ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಆದರೆ, ಯಾವ ಪಕ್ಷದಿಂದ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ, ಬಿಜೆಪಿಯಿಂದಲೇ ಸ್ಪರ್ಧಿಸಲು ಜೆಡಿಎಸ್ ಅವಕಾಶ ಕಲ್ಪಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿ ಕಾದು ನೋಡುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ನಾಯಕರು ಯೋಗೇಶ್ವರ್ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಇದನ್ನೂ ಓದಿ : ಧಾರಾಕಾರ ಮಳೆಗೆ ಬೆಚ್ಚಿಬಿದ್ದ ಬೆಂಗಳೂರು – ನಗರದ 1000 ಮನೆಗಳಿಗೆ ಜಲದಿಗ್ಬಂಧನ..!