ಬೆಂಗಳೂರು : ವಾಲ್ಮೀಕಿ ನಿಗಮದ ಹಗರಣ ಬೆನ್ನಲ್ಲೇ ಮತ್ತೊಂದು ಬಹೃತ್ ಅಕ್ರಮವೊಂದು ಬಯಲಾಗಿದೆ. ಬಿಬಿಎಂಪಿಯಲ್ಲಿ ಬರೋಬ್ಬರಿ 102 ಕೋಟಿಯ ಹಗರಣ ನಡೆದಿದೆ. 2017, 2018, 2019, 2020 ರ ಸಾಲಿನಲ್ಲಿ ಬಿಬಿಎಂಪಿಯ 8 ವಲಯಗಳಲ್ಲಿಯೂ ಭಾರೀ ಹಗರಣ ನಡೆದಿದೆ. ಈ ಅಕ್ರಮದಲ್ಲಿ ಜಂಟಿ ಆಯುಕ್ತರಾಗಿ ಕೆಲಸ ಮಾಡಿದ KAS ಅಧಿಕಾರಿಗಳು ಭಾಗಿಯಾಗಿದ್ದು, 30ಕ್ಕೂ ಹೆಚ್ಚು ಅಧಿಕಾರಿಗಳು ಹಗರಣದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ವ ಉದ್ಯೋಗಕ್ಕೆ ನೀಡಲಾಗುವ ಸಾಲ-ಸಬ್ಸಿಡಿಯಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು, ಬಿಬಿಎಂಪಿಯ ಬೃಹತ್ ಭ್ರಷ್ಟಾಚಾರವನ್ನು ಇದೀಗ ಬಿಟಿವಿ ಬಯಲು ಮಾಡ್ತಿದೆ. ಅಶಕ್ತ-ಅಬಲ-ಅಸಹಾಯಕ ಸಮುದಾಯಕ್ಕೆ ಸೇರಿದ ಯೋಜನೆಗಳಲ್ಲಿ ಅಕ್ರಮ ನಡೆದಿದೆ. ಖಾಸಗಿ ಏಜೆಂಟ್ಸ್ ನ್ನು ನೇಮಿಸಿಕೊಂಡು ಹಣ ಲೂಟಿ ಮಾಡಿದ್ದು, ಫಲಾನುಭವಿಗಳಿಂದ ದಾಖಲೆ ಪಡೆದು ವಂಚಿಸಿದ್ದಾರೆ. ಅರ್ಹರಿಗೆ ಹಣ ನೀಡದೆ ನಕಲಿ ಫಲಾನುಭವಿಗಳ ಪಟ್ಟಿ ಸೃಷ್ಟಿಸಿ ಅನೇಕ ಕೋ ಆಪರೇಟಿವ್ ಸೊಸೈಟಿಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಏಜೆಂಟ್ಸ್, ಸೊಸೈಟಿಗಳ ಜತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿದ್ದು, ಅರ್ಹರಿಗೆ ಸಿಗಬೇಕಾದ ಹಣ ದುಷ್ಪಕೂಟದಲ್ಲಿ ಹಂಚಿಕೆಯಾಗಿದೆ.
ಈ ಅಕ್ರಮಕ್ಕೆ ಸಂಬಂಧಿಸಿ ಸಮೃದ್ಧಿ ಭಾರತ ಫೌಂಡೇಷನ್ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದೆ. 8 ವಲಯಗಳ ಕೆಎಎಸ್ ಗಳು ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಇದೀಗ ಬಿಬಿಎಂಪಿ ವಿರುದ್ಧ ನಿರುದ್ಯೋಗಿಗಳ ಹಣ ದುರ್ಬಳಕೆ, ಅಕ್ರಮ ಹಣ ವರ್ಗಾವಣೆ, ನಕಲಿ ದಾಖಲೆಗಳ ಸೃಷ್ಟಿ, ಪಾಲಿಕೆಗೆ ಸುಳ್ಳು ಮಾಹಿತಿ ನೀಡಿರುವ ಆರೋಪ ಕೇಳಿಬಂದಿದೆ. ಫೌಂಡೇಷನ್ ಅಧ್ಯಕ್ಷ ಮಂಜುನಾಥ್ ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಮಂಜುನಾಥ್ ದೂರನ್ನು ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿ ಕೋಟ್ಯಾಂತರ ಅಕ್ರಮಕ್ಕೆ ಕಾರಣವಾದವರ ವಿರುದ್ದ ಕ್ರಮಕ್ಕೆ ಚಿಂತನೆ ನಡೆಸಿದೆ.
ಅಕ್ರಮದಲ್ಲಿ ಶಾಮೀಲಾದವರ ಹೆಡೆಮುರಿ ಕಟ್ಟೊಕ್ಕೆ ಲೋಕಾಯುಕ್ತ ಸಜ್ಜಾಗಿದ್ದು, ತನಿಖೆ ನಡೆಸ್ಲಿಕ್ಕೆ ಪೂರ್ವಾನುಮತಿ ಕೋರಿ ಬಿಬಿಎಂಪಿಗೆ ಪತ್ರ ಬರೆದಿಯಲಾಗಿದೆ. ಪೂರ್ವಾನುಮತಿ ನೀಡಿರುವ ಬಗ್ಗೆ ಬಿಟಿವಿಗೆ ಮಾಹಿತಿ ಲಭ್ಯವಾಗಿದೆ. ಪ್ರಾಥಮಿಕ ಭಾಗವಾಗಿ ಲೆಕ್ಕ ವಿಭಾಗದ ಉಪ ನಿಯಂತ್ರಕರ ವಿರುದ್ದ ತನಿಖೆ ನಡೆಯಲಿದ್ದು, ಪಶ್ಚಿಮ ವಲಯದ 9 ಅಧಿಕಾರಿಗಳ ವಿರುದ್ದ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ಕಲಂ 17-ಎ ಅನ್ವಯ ತನಿಖೆ ನಡೆಸಲಿದೆ.
ಇದನ್ನೂ ಓದಿ : ನಟ ದರ್ಶನ್ ವಿರುದ್ಧವೇ ಸ್ಫೋಟಕ ಹೇಳಿಕೆ ನೀಡಿದ ಪವಿತ್ರಾ ಗೌಡ..!