ನವದಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಸತತ ಆರನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಸರ್ಕಾರದ ಕಳೆದ 10 ವರ್ಷದಲ್ಲಿ ಮಾಡಿರುವ ಸಾಧನೆ ಹಾಗೂ ಸಮಾಜ ಮತ್ತು ಆರ್ಥಿಕತೆಯ ವಿವಿಧ ಬಗೆಯಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಅವರು ವಿಸ್ತೃತವಾಗಿ ಮಾತನಾಡಿ ವಿವರ ನೀಡಿದ್ದಾರೆ.
ಇದೇ ವೇಳೆ ಅವರು ತಮ್ಮ ಸರ್ಕಾರ ನಾಲ್ಕು ಜಾತಿಗಳಿಗೆ ಹೆಚ್ಚು ಗಮನ ಕೊಡುತ್ತಿದೆ ಎಂದು ಹೇಳಿದ್ದಾರೆ. ಬಡವರು, ಮಹಿಳೆಯರು, ಯುವಸಮುದಾಯದವರು ಮತ್ತು ರೈತರು ಇವರೇ ತಮ್ಮ ಸರ್ಕಾರಕ್ಕೆ ನಾಲ್ಕು ಜಾತಿಗಳಾಗಿದ್ದು, ಇವರ ಏಳ್ಗೆ ತಮ್ಮ ಸರ್ಕಾರದ ಆದ್ಯತೆ ಆಗಿದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
2047ರಷ್ಟರಲ್ಲಿ ಭಾರತವನ್ನು ವಿಕಸಿತ ಭಾರತ ಅಥವಾ ಮುಂದುವರಿದ ದೇಶವನ್ನಾಗಿ ಮಾಡುವುದು ತಮ್ಮ ಸರ್ಕಾರದ ಸಂಕಲ್ಪ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಪ್ರತಿ ಕುಟುಂಬಕ್ಕೆ ನೀರು, ಗ್ಯಾಸ್, ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಸಾಧನೆಗೆ ಸರ್ಕಾರ ಶ್ರಮಿಸಿದೆ. 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿದ್ದೇವೆ. ಗ್ರಾಮೀಣ ಪ್ರದೇಶದ ಜನರ ಆರ್ಥಿಕತೆ ವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ.
ಇದನ್ನೂ ಓದಿ : ಆದಾಯ ತೆರಿಗೆದಾರರಿಗೆ ಸಿಹಿ ಸುದ್ದಿ – ಆದಾಯ ತೆರಿಗೆ ಮಿತಿ 7 ಲಕ್ಷಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ..!