ಬಳ್ಳಾರಿ : ರಾಜ್ಯದಲ್ಲಿ ಮುಡಾ ಹಗರಣ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿ ಮಾಡಿದೆ. ಇದರ ಬೆನ್ನಲ್ಲೇ ಇತ್ತ ಬಳ್ಳಾರಿಯಲ್ಲಿ ಬುಡಾ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಶುರು ಮಾಡಿದೆ. ಹೌದು.. ಬುಡಾ ಅಧ್ಯಕ್ಷ ಆಂಜನೇಯಲು ತನ್ನ ಅಧಿಕಾರ ದುರುಪಯೋಗ ಮಾಡಿ ನೂರಾರು ಕೋಟಿ ಕೊಳ್ಳೆ ಹೊಡೆದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಬಳ್ಳಾರಿ ಶಾಸಕರೇ ಸರ್ಕಾರಕ್ಕೆ ದೂರು ನೀಡಿದ್ದಾರೆ.
ಆಂಜನೇಯಲು 2024ರ ಫೆಬ್ರವರಿಯಲ್ಲಿ ಬೂಡಾ ಅಧ್ಯಕ್ಷರಾಗಿ ನೇಮಕವಾಗಿದ್ದರು. ಬಳಿಕ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುವ ಪ್ರತಿ ಸಭೆಯಲ್ಲಿಆಂಜನೇಯಲು ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಮಾರ್ಚ್, ಜುಲೈ ತಿಂಗಳ ಸಭೆಯ ನಡಾವಳಿಗಳನ್ನ ಉಲ್ಲಂಘನೆ ಮಾಡಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು, 6 ತಿಂಗಳ ಹಿಂದೆ ಪ್ರಾಧಿಕಾರದ ಕಮಿಷನರ್ ರಮೇಶ್ ಸೇರಿ 6 ಮಂದಿ ಲೋಕಾ ಟ್ರಾಪ್ ಆಗಿದ್ರು. 6 ಮಂದಿ ಅರೆಸ್ಟ್ ಆದ್ರೂ ಬುದ್ದಿ ಕಲಿಯದ ಬುಡಾ ಅಧ್ಯಕ್ಷ ಆಂಜನೇಯಲು, ಅಧಿಕಾರಿಗಳಿಗೆ ಬೆದರಿಕೆ ಹಾಕಿ ಬೃಹತ್ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಬುಡಾ ಅಧ್ಯಕ್ಷ ಆಂಜನೇಯಲು ಅಕ್ರಮದ ವಿರುದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್ ದಂಗೆ ಎದ್ದಿದ್ದಾರೆ. ಅಕ್ರಮದ ತನಿಖೆ ನಡೆಸಲು ಸರ್ಕಾರಕ್ಕೆ ಶಾಸಕರು ಪತ್ರ ಬರೆದಿದ್ದಾರೆ.
ಕಮಿಟಿ ರಚನೆ, ಅಲಾಟ್ಮೆಂಟ್ ಅನುಮತಿ, ಸೈಟ್ ಹಂಚಿಕೆಯಲ್ಲಿ ಭಾರೀ ಅಕ್ರಮ ಆಗಿದೆ ಎಂದು ಆಂಜನೇಯಲು ವಿರುದ್ದ ಬಳ್ಳಾರಿ ಸಾರ್ವಜನಿಕರೂ ದೂರು ದಾಖಲಿಸಿದ್ದಾರೆ. ಬುಡಾ ಅಧ್ಯಕ್ಷ ಆಂಜನೇಯಲು ಇಷ್ಟ ಬಂದಂತೆ ನಿರ್ಣಯ ಮಾಡಿದ್ದಾರೆ. ಅಧಿಕಾರಿಗಳಿಗೆ ಬೆದರಿಕೆ ಹಾಕಿ ಅಕ್ರಮಗಳನ್ನು ನಡೆಸಿದ್ದಾರೆ ಎಂದು ಆಂಜನೇಯಲು ಅವಧಿಯ ಅಕ್ರಮಗಳ ತನಿಖೆ ನಡೆಸಬೇಕೆಂದು ಶಾಸಕರು ಪತ್ರ ಬರೆದು ಆಗ್ರಹಿಸಿದ್ದಾರೆ. ಈಗಾಗಲೇ ಆಂಜನೇಯ ವಿರುದ್ದ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ. ಈತನ ಹಿನ್ನಲೆ ಪರಿಶೀಲಿಸದೇ ಬುಡಾ ಅಧ್ಯಕ್ಷ ಮಾಡಿದ್ದಾರೆಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಟಿಪ್ಪರ್ ಹರಿದು 30 ಕುರಿಗಳು ಸಾವು..!